ಅಡುಗೆ ಮಾಡಿದ್ದವರು ಏಕೆ ಬಡಿಸಲಿಲ್ಲ?

ಶೆಟ್ಟರ್‌
Advertisement

ಹುಬ್ಬಳ್ಳಿ: ನಾವು ಅಡುಗೆ ಮಾಡಿದ್ದು, ಬಿಜೆಪಿಯವರು ಬಡಿಸುತ್ತಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ‌ ಜಗದೀಶ ಶೆಟ್ಟರ್ ತಿರುಗೇಟು ನೀಡಿದ್ದು, ನಾವು ಮಾಡಿದ ಅಡುಗೆಯನ್ನು ಬಿಜೆಪಿಯವರು ಬಡಿಸಿದ್ದಾರೆ ಎನ್ನುವ ಕಾಂಗ್ರೆಸ್‌ನವರು, ತಾವೇ ಏಕೆ ಬಡಿಸಲಿಲ್ಲ ಎಂದು‌ ಪ್ರಶ್ನಿಸಿದರು.
ತಾಂಡಾ ನಿವಾಸಿಗಳಿಗೆ ರಾಜ್ಯ ಸರ್ಕಾರದಿಂದ ಹಕ್ಕುಪತ್ರ ವಿತರಣೆ ಮಾಡಿದ ಕುರಿತು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಗೆ ತಿರುಗೇಟು ನೀಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿ 60ಕ್ಕೂ ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್‌ನವರು, ಮಾಡಿದ ಅಡುಗೆಯನ್ನು ಯಾಕೆ ಆಗಲೇ ಬಡಿಸಲಿಲ್ಲ ಎಂದರು. ನಾವು ಹಕ್ಕುಪತ್ರ ಕೊಟ್ಟಾಗ ಕಾಂಗ್ರೆಸ್ ನವರಿಗೆ ಜ್ಞಾನೋದಯವಾಗಿದೆ. ಬಂಜಾರ ಸಮುದಾಯವರಿಗೆ ನ್ಯಾಯ ಕೊಡಿಸುವ ಬಿಜೆಪಿ ಕಾರ್ಯಕ್ರಮದ ಯಶಸ್ಸು ನೋಡಿ‌ ಹೊಟ್ಟೆ ಉರಿದಿದೆ. ಅದಕ್ಕಾಗಿ ಈ ರೀತಿ ಸಲ್ಲದ ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಮುಸ್ಲಿಂ ವಿರೋಧಿಯಲ್ಲ. ಅವರನ್ನು ಹೊರಗಿಡುವ ಕೆಲಸವನ್ನು ಪಕ್ಷ ಮಾಡಿಲ್ಲ. ಹಿಂದೂ ಸಮಾಜವನ್ನು ಒಂದುಗೂಡಿಸುವ ಕೆಲಸವನ್ನು ಆರ್‌ಎಸ್‌ಎಸ್‌ ಮಾಡುತ್ತಿದೆ. ಎಲ್ಲಾ ಜಾತಿ ಮತ್ತು ಧರ್ಮದವರನ್ನು ಒಗ್ಗೂಡಿಸಿಕೊಂಡು ಹೋಗಿ ಎಂದು‌ ಮೋದಿ‌ ಹೇಳಿದ್ದಾರೆ. ಕಾಂಗ್ರೆಸ್‌ನವರು ಮುಸ್ಲಿಮರನ್ನು ಮತಬ್ಯಾಂಕ್ ಮಾಡಿಕೊಂಡು ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಯಾರಿಗೂ ಮತಬ್ಯಾಂಕ್ ಆಗಬೇಡಿ ಎಂದು, ವಾಸ್ತವದ ನೆಲೆಯಲ್ಲಿ‌ ನಾವು ಹೇಳುತ್ತಿದ್ದೇವೆ ಎಂದು‌ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮೋದಿ ಅವರು ಸಿದ್ದರಾಮಯ್ಯ ಅವರಿಗೆ ಭಯಪಡುತ್ತಾರೆ ಎಂಬುದು ಈ ವರ್ಷದ ಹೊಸ ಜೋಕ್. ವಿಶ್ವದಲ್ಲೇ ಪ್ರಭಾವಿಯಾದ ಮೋದಿ ಅವರು ಇವರಿಗೆ ಭಯಪಡುವುದುಂಟೆ. ಹಾಗೆ ನೋಡಿದರೆ, ಸಿದ್ದರಾಮಯ್ಯ ಅವರನ್ನು ಕಂಡರೆ ಸಣ್ಣ ಹುಡುಗರು ಸಹ ಭಯಪಡುವುದಿಲ್ಲ ಎಂದು ವ್ಯಂಗ್ಯವಾಡಿದರು.