ಮಂಗಳೂರು: ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮದೇವರ ಪ್ರತಿಮಾ ನಿರ್ಮಾಣಕ್ಕೆ ಹೆಗ್ಗಡ ದೇವನಕೋಟೆಯಿಂದ ಐದು ಶಿಲೆಗಳು, ಮಹಾಬಲೀಪುರದಿಂದ ಎರಡು, ನೇಪಾಳದ ಗಂಡಕಿಯಿಂದ ಎರಡು, ಕಾರ್ಕಳದಿಂದ ಒಂದು ಶಿಲೆ ಸೇರಿದಂತೆ ಶಿಲೆಗಳು ಸಂಗ್ರಹಣೆಯಾಗಿವೆ. ಬಂದಂತಹ ಶಿಲೆಗಳಲ್ಲಿ ಅತ್ಯುತ್ತಮವಾದ ಶಿಲೆ ಗುರುತಿಸಿ ಅದರಲ್ಲಿ ರಾಮ ದೇವರ ಪ್ರತಿಮೆ ನಿರ್ಮಾಣವಾಗಲಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದೆ. ದೇವಾಲಯದ ವೇದಿಕೆ ನಿರ್ಮಾಣವಾಗಿ ಸುತ್ತಲೂ ಕಂಬಗಳನ್ನು ಇಟ್ಟು ಮೇಲೆ ಶಿಲಾಫಲಕ ಅಳವಡಿಸುವ ಕಾರ್ಯ ನಡೆಯುತ್ತಿದೆ. ಅಲ್ಲಿ ರಾಮದೇವರ ಪ್ರಾಣಪ್ರತಿಷ್ಠೆ ಕಾರ್ಯ ನಡೆಯುತ್ತದೆ ಎಂದರು.
‘ರಾಮನ ಸೇವೆಯಲ್ಲಿ ಹನುಮನದು ಪ್ರಧಾನಪಾತ್ರ. ಅದರಂತೆ ರಾಮನ ಸೇವೆಯಲ್ಲಿ ಹನುಮಂತ ದೊಡ್ಡ ಆದರ್ಶ. ನಾವೆಲ್ಲರೂ ಹನುಮಂತನ ಶಕ್ತಿ, ಸಾಮರ್ಥ್ಯ ಮೈಗೂಡಿಸಿಕೊಂಡು ರಾಮದೇವರ ಮಂದಿರ ಕಾರ್ಯದಲ್ಲಿ ತೊಡಗಿಕೊಂಡಂತೆ, ಮುಂದೆ ರಾಮರಾಜ್ಯ ನಿರ್ಮಾಣದ ಕನಸು ನನಸಾಗಬೇಕು. ಆ ದಿಸೆಯಲ್ಲಿ ನಾವು ಶ್ರಮಿಸೋಣ’ ಎಂದರು.