ಬಾಗಲಕೋಟ(ಕುಳಗೇರಿ ಕ್ರಾಸ್): ಕರ್ನಾಟಕ ಪೊಲೀಸರು ತಮ್ಮ ಕರ್ತವ್ಯದ ಜೊತೆಗೆ ಮಾನವೀಯ ಕಾರ್ಯಗಳನ್ನ ಮಾಡುತ್ತ ಜನ-ಮನ ಗೆಲ್ಲುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಗ್ರಾಮದಲ್ಲಿ ನಡೆದ ಈ ಘಟನೆಯೇ ನಿದರ್ಶನ. ಗ್ರಾಮದ ಪೊಲೀಸ್ ಠಾಣೆಯ ಸಿಬ್ಬಂದಿ ಅನಾಥ ಶವಕ್ಕೆ ತಾವೇ ಮುಂದೆ ನಿಂತು ಗ್ರಾಪಂ ಹಾಗೂ ಸಾರ್ವಜನಿಕರ ಸಹಾಯದಿಂದ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಗ್ರಾಮದ ರಾಷ್ಟ್ರೀಯ ಹೆದ್ದಾರಿ ೨೧೮ರ ಪಕ್ಕ ಹೊರವಲಯದಲ್ಲಿ ಸುಮಾರು ೫೦ ರಿಂದ ೫೫ ವರ್ಷದ ಮಹಿಳೆ ಶವ ಪತ್ತೆಯಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಕುಟುಂಬಸ್ಥರ ಬಗ್ಗೆ ವಿಚಾರಿಸಿದಾಗ ಮೃತ ಮಹಿಳೆ ಅನಾಥ ಎಂದು ತಿಳಿದು ಬಂದಿದೆ. ನಂತರ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಪೊಲೀಸ್-ಗ್ರಾಪಂ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿ ಧಾರ್ಮಿಕ ವಿಧಿ-ವಿಧಾನಗಳಿಂದ ಅನಾಥ ಶವದ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಸದ್ಯ ಪೊಲಿಸ್ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.