ಅನಿಲ ಸೋರಿಕೆ: ಒಬ್ಬ ಸಾವು

Advertisement

ಪಣಜಿ(ವಾಸ್ಕೊ): ವಾಸ್ಕೊದ ಫಕೀರ್ ಗಲ್ಲಿ-ಸಾಯಿನಗರದಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಉಸಿರುಗಟ್ಟುವಿಕೆಯಿಂದ ಒಬ್ಬ ಸಾವನ್ನಪ್ಪಿದರೆ, ಇತರ ಮೂವರನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಕ್ಕಿರುವ ಮಾಹಿತಿ ಪ್ರಕಾರ ರಾತ್ರಿ ಊಟ ಮುಗಿಸಿ ನಾಲ್ವರು ಮಲಗಿದ್ದರು. ಬೆಳಗಿನ ಜಾವ ನೆರೆಹೊರೆಯ ಯುವಕನೊಬ್ಬ ಬಾಗಿಲು ಬಡಿದು ಎಬ್ಬಿಸಲು ಯತ್ನಿಸಿದ್ದಾನೆ. ಯಾವುದೇ ಚಲನೆಯನ್ನು ಗಮನಿಸದ ಕಾರಣ ಬಾಗಿಲು ಒಡೆದು ತೆರೆಯಲಾಯಿತು. ಈ ವೇಳೆ ನಾಲ್ವರೂ ಅಸ್ವಸ್ಥಗೊಂಡಿರುವುದು ಕಂಡು ಬಂತು. ಎರಡು ತಿಂಗಳ ಹಿಂದೆಯಷ್ಟೇ ಕೆಲಸದ ನಿಮಿತ್ತ ಈ ನಾಲ್ವರು ಗೋವಾಕ್ಕೆ ಬಂದಿದ್ದರು. ಸಂಜಯ್, ಧರಂವೀರ್, ಅಶೋಕ್ ಮತ್ತು ಅಮನ್ ಇವರು ಮೂಲತಃ ಬನಾರಸ್ ಮೂಲದವರು. ಘಟನೆಯಲ್ಲಿ ಸಂಜಯ್ ಸಾವನ್ನಪ್ಪಿದ್ದು, ಧರಂವೀರ್, ಅಶೋಕ್ ಮತ್ತು ಅಮನ್ ಗೋವಾ ವೈದ್ಯಕೀಯ ಕಾಲೇಜು ಬಾಂಬೋಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಊಟದ ನಂತರ ಗ್ಯಾಸ್‌ಸ್ಟೋವ್‌ವನ್ನು ಸರಿಯಾಗಿ ಬಂದ್ ಮಾಡದೆ ನಾಲ್ವರೂ ನಿದ್ದೆಗೆ ಜಾರಿದ ಕಾರಣ ಈ ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ಅಂದಾಜಿಸಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.