ಅಪಘಾತ ಪಡಿಸಿದ ಶ್ವಾನದ ಪಶ್ಚಾತಾಪಕ್ಕೆ ಜನರು ನಿಬ್ಬೆರಗು!

Advertisement

ದಾವಣಗೆರೆ: ಶ್ವಾನ ಅಡ್ಡಬಂದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಹಿನ್ನೆಲೆ ಮೃತನ ಕುಟುಂಬಸ್ಥರ ಮನೆಗೆ ಸ್ವತಃ ನಾಯಿಯೇ ತೆರಳಿ ಕಣ್ಣೀರು ಸುರಿಸಿ, ಸಾಂತ್ವನ ಹೇಳಿದ ವಿಸ್ಮಯಕಾರಿ ಘಟನೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ನಡೆದಿದೆ.
ತಿಪ್ಪೇಶ್ (21) ಸಾವನ್ನಪ್ಪಿದ ಯುವಕ. ಮೃತ ಯುವಕ ಕಳೆದ ಗುರುವಾರ ಕ್ಯಾಸಿನಕೆರೆ ಗ್ರಾಮದಿಂದ ಆನವೇರಿ ಗ್ರಾಮಕ್ಕೆ ಸಹೋದರಿಯನ್ನು ಬಿಟ್ಟು ಬರಲು ಹೋಗಿದ್ದ. ವಾಪಸ್ ಬರುವಾಗ ಕುರುಬರವಿಟ್ಲಾಪುರದ ಬಳಿ ಬೈಕ್‌ಗೆ ನಾಯಿ ಅಡ್ಡ ಬಂದು ಅಪಘಾತ ನಡೆದು ಸ್ಥಳದಲ್ಲೇ ತಿಪ್ಪೇಶ್ ಸಾವನ್ನಪ್ಪಿದ್ದ.
ಘಟನೆ ನಡೆದು ಮೂರನೇ ದಿನಕ್ಕೆ ಮೃತನ ಮನೆಗೆ ಆಗಮಿಸಿದ ಅದೇ ಶ್ವಾನ, ಮನೆಗೆ ಬಂದು ತಿಪ್ಪೇಶ್ ಕೊಠಡಿ, ಅಡುಗೆ ಮನೆಯನ್ನು ಸುತ್ತಾಡಿ, ಮೃತನ ತಾಯಿ ಕೈ ಮೇಲೆ ಕಾಲಿಟ್ಟು ಕಣ್ಣಿರಿಡುವ ಮೂಲಕ ತನ್ನ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿದೆ. ಅಲ್ಲದೇ, ತಿಪ್ಪೇಶ್ ತಾಯಿಯನ್ನು ಅಳದಂತೆ ಸಮಾಧಾನ ಪಡಿಸಿದೆ. ಈ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶ್ವಾನದ ಪಶ್ಚಾತಾಪದ ರೀತಿಗೆ ಜನರು ಅಚ್ಚರಿ ಪಡುತ್ತಿದ್ದಾರೆ.