ಆಪರೇಷನ್ ಕಮಲದ ಸುಳಿವು ನೀಡಿದ ನಿರಾಣಿ

ನಿರಾಣಿ
Advertisement

ಬಾಗಲಕೋಟೆ(ಕೆರೂರ): ರಾಜ್ಯ ಕಾಂಗ್ರೆಸ್ ಐದು ವರ್ಷ ಆಡಳಿತವನ್ನು ಪೂರೈಸಲಿ ಎಂಬುವುದು ನಮ್ಮ ಆಶಯ. ಆದರೆ ಅವರ ಆಂತರಿಕ ಜಗಳ ತೀವ್ರವಾಗಿದ್ದು, ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಯಾಗಲಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಭವಿಷ್ಯ ನುಡಿದರು.
ಕೆರೂರು ಸಮೀಪದ ಕೆರಕಲಮಟ್ಟಿ ಕೇದಾರನಾಥ್ ಸಕ್ಕರೆ ಕಾರ್ಖಾನೆಯ ಕಬ್ಬುನುರಿಸುವ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲ ಬಾರಿ ಸಿಎಂ ಆದಾಗಿನಂತೆ ಈಗ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಗುತ್ತಿಲ್ಲ. ರಾಜಕೀಯವಾಗಿ ಮರು ಜೀವ ನೀಡಿದ ಬಾದಾಮಿ ಕ್ಷೇತ್ರದ ಅಭಿವೃದ್ಧಿ ಕಾರ್ಯ ಮರೆತಿದ್ದು, ರಾಜ್ಯದ ಅಭಿವೃದ್ಧಿ ನಿಂತು ಹೋಗಿದೆ ಎಂದು ದೂರಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗಿದೆ. ಕ್ಷೇತ್ರದ ಅಭಿವೃಧ್ದಿ ಕಾರ್ಯಗಳಿಗೆ ಅನುದಾನ ನೀಡದಿರುವುದು ಸಾಕಷ್ಟು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಮುಂಬರುವ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಯಾಗಲಿದೆ ಎಂದು ಹೇಳಿದರಲ್ಲದೆ ಆಪರೇಷನ್ ಕಮಲದ ಸುಳಿವು ನೀಡಿದರು.