ಇಂಡಿಯಾ ಒಕ್ಕೂಟ ಛಿದ್ರ, ಎನ್‌ಡಿಎ ಸುಭದ್ರ

Advertisement

ಹುಬ್ಬಳ್ಳಿ: ಇಂಡಿಯಾ ಒಕ್ಕೂಟ ಛಿದ್ರವಾಗಿದ್ದು, ಎನ್‌ಡಿಎ ಸುಭದ್ರವಾಗಿದೆ. ಇನ್ನು ಮುಂದೆ ಏನಿದ್ದರೂ ಬರೀ ಎನ್‌ಡಿಎ ಮಾತ್ರ. ಬಹುತೇಕ ಇನ್ನೊಂದು ತಿಂಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಲಿದೆ. ಎಲ್ಲ ಕಡೆ ಬಿಜೆಪಿ ಪರ ಅಲೆ ಇರುವುದರಿಂದ ಹೆಚ್ಚಿನ ಸ್ಥಾನಗಳನ್ನು ನಮ್ಮ ಪಕ್ಷ ಗೆಲ್ಲುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು,.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ಈ ದೇಶದ ಕೋಟ್ಯಂತರ ಜನರ ಅಭಿಲಾಷೆ. ಹೀಗಾಗಿ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರು.
ಇಂಡಿಯಾ ಒಕ್ಕೂಟದಲ್ಲಿ ಆರಂಭಿಕ ಹಂತದಲ್ಲಿದ್ದ ಒಗ್ಗಟ್ಟು ಇದೀಗ ಬಿದ್ದು ಹೋಗಿದೆ. ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿಯವರು ಆ ಒಕ್ಕೂಟದಿಂದ ಹೊರ ಬಂದಿದ್ದಾರೆ. ಇಂಡಿಯಾ ಒಕ್ಕೂಟ ಅಸ್ತಿತ್ವ ಕಳೆದುಕೊಂಡಿದೆ. ತೃತೀಯ ರಂಗ ಎನ್ನುವುದು ಯಾವುದೂ ಇಲ್ಲ, ಇವಾಗ ಏನಿದ್ದರೂ ಎನ್‌ಡಿಎ ಅಷ್ಟೇ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ. ಮೈಸೂರು ಭಾಗದ ಪ್ರಮುಖರ ಜೊತೆಗೆ ಸಮಾಲೋಚನೆ ನಡೆಸಲಿದ್ದಾರೆ. ಚುನಾವಣೆಗೆ ರಣಕಹಳೆ ಊದಿದರು ಎಂಬುದೆಲ್ಲ ಮಾಧ್ಯಮಗಳ ಸೃಷ್ಟಿಯಷ್ಟೇ ಎಂದು ಹೇಳಿದರು.