ಇವರೇ ನಮ್ಮ ಗಗನಯಾತ್ರಿಗಳು

Advertisement

ನವದೆಹಲಿ: ಗಗನಯಾನ ಯೋಜನೆಯಲ್ಲಿ ಬಾಹ್ಯಾಕಾಶಕ್ಕೆ ಹೋಗಲಿರುವ ನಾಲ್ವರು ಗಗನಯಾತ್ರಿಗಳ ಹೆಸರುಗಳನ್ನು ಪ್ರಧಾನಿ ನರೇಂದ್ರ ಮೋದಿ ಬಹಿರಂಗಪಡಿಸಿದ್ದಾರೆ.
ಗ್ರೂಪ್ ಕ್ಯಾಪ್ಟನ್‌ಗಳಾದ ಪ್ರಶಾಂತ್ ಬಾಲಕೃಷ್ಣ ನಾಯರ್, ಅಜಿತ್ ಕೃಷ್ಣನ್, ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಭಾರತದಿಂದ ಬಾಹ್ಯಾಕಾಶಕ್ಕೆ ನೆಗೆಯಲಿರುವ ಮೊದಲ ಗಗನಯಾತ್ರಿಗಳಾಗಿದ್ದಾರೆ. ಇವರೆಲ್ಲರೂ ಭಾರತೀಯ ವಾಯುಸೇನೆಯ ಅಧಿಕಾರಿಗಳು.
ರಷ್ಯಾದ ತಂಡದ ಜೊತೆಯಲ್ಲಿ ಭಾರತದ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ಹೋಗಿ ೪೦ ವರ್ಷಗಳ ನಂತರ ಈಗ ೨೦೨೪-೨೫ರಲ್ಲಿ ಇಸ್ರೋದ ಗಗನಯಾನ ಯೋಜನೆಯಡಿ ಬಾಹ್ಯಾಕಾಶಕ್ಕೆ ನೆಗೆಯಲು ಸಜ್ಜಾಗಿದ್ದಾರೆ. ಕೇರಳದ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪ್ರಧಾನಿ ಮೋದಿ, ವ್ಯೋಮಯಾನಿಗಳ ಹೆಸರುಗಳನ್ನು ಬಹಿರಂಗಗೊಳಿಸಿದರು. ನಾಲ್ಕು ವರ್ಷಗಳಿಂದ ತೀವ್ರ ತರಬೇತಿ ಪಡೆಯುತ್ತಿರುವ ಅವರಿಗೆ ಅಭಿನಂದನೆ ಸಲ್ಲಿಸಿದರು.
ವ್ಯೋಮಯಾನಿಗಳು ಮೊದಲು ರಷ್ಯಾದ ಯೂರಿ ಗಗಾರಿನ್ ಕಾಸ್ಮೊನಾಟ್ ಟ್ರೈನಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆದಿದ್ದಾರೆ. ಮುಂದಿನ ಹಂತದಲ್ಲಿ ಅಮೆರಿಕದ ನಾಸಾದಲ್ಲೂ ಕೂಡ ತರಬೇತಿ ಪಡೆಯಲಿದ್ದಾರೆ. ಮಾನವರನ್ನು ಬಾಹ್ಯಾಕಾಶಕ್ಕೆ ಸಾಗಿಸಬಲ್ಲ ಸಾಮರ್ಥ್ಯ ಗಗನಯಾನ ಮಿಷನ್ ಸಾದರಪಡಿಸಲಿದೆ. ಭೂಮಿಯಿಂದ ೪೦೦ ಕಿಲೋ ಮೀಟರ್ ಎತ್ತರದ ಕಕ್ಷೆಯಲ್ಲಿ ನಾಲ್ಕು ದಿನಗಳ ಕಾಲ ಗಗನನೌಕೆ ಸುತ್ತು ಹಾಕಲಿದ್ದು, ನಂತರ ಅರಬ್ಬಿ ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿಯಲಿದೆ.