ಉಪಕಾರ ಮಾಡಲು ಹೋದರೆ ಈ ರೀತಿ ಆಗುತ್ತೆ ಅನ್ನೋದೇ ಬೇಸರ

Advertisement

ಪೋಕ್ಸೋ ಪ್ರಕರಣಕ್ಕೆ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಪ್ರತಿಕ್ರಿಯೆ

ಬೆಂಗಳೂರು: ಒಬ್ಬರಿಗೆ ಉಪಕಾರ ಮಾಡಲು ಹೋದರೆ ಈ ರೀತಿ ಆಗುತ್ತೆ ಅನ್ನೋದೇ ಬೇಸರ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಹೇಳಿದ್ದಾರೆ.
ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಕುರಿತು ಮಾತನಾಡಿರುವ ಅವರು ಒಬ್ಬ ತಾಯಿ ಮಗಳು ಕಣ್ಣೀರು ಹಾಕುತ್ತಿದ್ದಾರೆಂದು ಒಳಗೆ ಕರೆದುಕೊಂಡು ಹೋಗಿ ಕುಳ್ಳಿರಿಸಿ ಸಮಸ್ಯೆ ಏನು ಎಂದು ಕೇಳಿದ್ದೆ. ನನಗೆ ತುಂಬಾ ಅನ್ಯಾಯ ಆಗಿದೆ ಎಂಬಿತ್ಯಾದಿಯಾಗಿ ಹೇಳಿದ್ದರು. ಇದಾದ ಬಳಿಕ ನಾನು ಪೊಲೀಸ್ ಕಮಿಷನರ್​ಗೆ ಕರೆ ಮಾಡಿ ಇವರಿಗೆ ಅನ್ಯಾಯ ಆಗಿದೆ ಹೀಗಾಗಿ ನ್ಯಾಯ ಒದಗಿಸಿ ಎಂದು ದಯಾನಂದ ಅವರಿಗೆ ತಿಳಿಸಿ ತಾಯಿ ಹಾಗೂ ಮಗಳು ಇಬ್ಬರನ್ನೂ ಅಲ್ಲಿಗೆ ಕಳುಹಿಸಿಕೊಟ್ಟೆ. ಅದಾದ ಬಳಿಕ ಅಲ್ಲೇ ನನ್ನ ಮೇಲೂ ಏನೇನೋ ಮಾತನಾಡಲು ಶುರು ಮಾಡಿದರು. ಹೀಗಿರುವಾಗ ಇದೇನು ಸರಿ ಕಾಣಿಸ್ತಿಲ್ಲ, ಆರೋಗ್ಯ ಸರಿ ಇಲ್ಲದಂತೆ ಕಾಣಿಸಿತು. ಹೆಚ್ಚು ಮಾತನಾಡಿದರೆ ಉಪಯೋಗವಿಲ್ಲವೆಂದು ನಾನವರನ್ನು ಪೊಲೀಸ್ ಕಮಿಷನರ್ ಬಳಿ ಕಳುಹಿಸಿದೆ. ಅವರು ಈ ಬಗ್ಗೆ ಹೆಚ್ಚಿನ ವಿಚಾರ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೀಗ ಇದನ್ನು ಬೇರೆ ರೀತಿಯಾಗಿ ತಿರುಗಿಸಿ ಎಫ್​ಐಆರ್​ ಮಾಡಿದ್ದಾರೆಂದು ತಿಳಿದು ಬಂತು. ಅದನ್ನು ಕಾನೂನು ಅನ್ವಯ ಎದುರಿಸ್ತೀನಿ. ಆದರೆ ಒಬ್ಬರಿಗೆ ಉಪಕಾರ ಮಾಡಲು ಹೋದರೆ ಈ ರೀತಿ ಆಗುತ್ತೆ ಅನ್ನೋದೇ ಬೇಸರ. ಕಷ್ಟ ಇದೆ ಎಂದು ಸ್ವಲ್ಪ ದುಡ್ಡೂ ಕೊಟ್ಟು ಕಳುಹಿಸಿದ್ದೀನಿ. ಹೀಗಿದ್ದರೂ ಇಂತಹ ಬೆಳವಣಿಗೆ ಆಗಿದೆ. ಇರಲಿ, ಇದನ್ನು ಎದುರಿಸೋಣ. ಇದನ್ನು ನಾನು ನಿರೀಕ್ಷಿಸಿರಲಿಲ್ಲ ಎಂದರು.

ರಾಜಕೀಯ ಪ್ರೇರಿತವೇ ?: ನಾನು ಇದನ್ನು ಎದುರಿಸ್ತೇನೆ. ಇದನ್ನು ರಾಜಕೀಯ ಪ್ರೇರಿತ ಎಂದು ಯಾಕೆ ಹೇಳಲಿ ಎಂದು ಕೇಳಿದ್ದಾರೆ.