ಎಣ್ಣೆ ಪಾರ್ಟಿ: ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು

Advertisement

ಬೆಳಗಾವಿ: ಕರ್ತವ್ಯದ ವೇಳೆ ಮದ್ಯದ ಪಾರ್ಟಿ ಮಾಡಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಆದೇಶ ಹೊರಡಿಸಿದ್ದಾರೆ.
೧೧೨ ಪೆಟ್ರೋಲಿಂಗ್ ವಾಹನದಲ್ಲಿ ಎಣ್ಣೆ, ಮಾಂಸದೂಟ ಮಾಡಿದ್ದ ಸಿಬ್ಬಂದಿ ಎಚ್.ಎಂ. ಕಮತೆ ಮತ್ತು ದುಮಾಳ ಅವರನ್ನು ಎಸ್ಪಿ ಅಮಾನತು ಮಾಡಿದ್ದಾರೆ. ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದ ಹೊರ ವಲಯದಲ್ಲಿ ಈ ಪಾರ್ಟಿ ನಡೆದಿತ್ತು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಡಾ. ಭೀಮಾಶಂಕರ ಗುಳೇದ, ಖಡಕಲಾಟ್ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ಊಟ ಮಾಡುವ ನೆಪದಲ್ಲಿ ಸಾರಾಯಿ ಸೇವನೆ ಮಾಡಿರುವುದು ಗಮನಕ್ಕೆ ಬಂದ ತಕ್ಷಣ ಶಿಸ್ತು ಕ್ರಮಕ್ಕೆ ಆದೇಶ ಮಾಡಲಾಗಿದೆ ಎಂದರು.
ಆ ಬಳಿಕ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದೇನೆ. ಅಲ್ಲದೇ ಇಬ್ಬರು ಪೊಲೀಸ್ ಸಿಬ್ಬಂದಿ ಮೇಲೆ ನಿಗಾ ಇಡಲು ವಿಫಲವಾಗಿದ್ದರಿಂದ ಚಿಕ್ಕೋಡಿ ಮತ್ತು ಖಡಕಲಾಟ್ ಎರಡು ಠಾಣೆ ಪಿಎಸ್‌ಐಗೆ ಶೋಕಾಸ್ ನೋಟಿಸ್ ನೀಡಿದ್ದೇನೆ. ಚಿಕ್ಕೋಡಿ ಡಿಎಸ್‌ಪಿಗೂ ಪ್ರಕರಣದ ಕುರಿತು ವರದಿ ಸಲ್ಲಿಸುವಂತೆ ಆದೇಶಿಸಿದ್ದೇನೆ ಎಂದರು.