ಏಕಾಂತದಲ್ಲಿ ತಪ್ಪು ಮಾಡಲು ಸಾಧ್ಯವೇ ಇಲ್ಲ

Advertisement

ಯಾರೂ ನೋಡದಂತೆ ತಪ್ಪು ಮಾಡಿದ್ದೇನೆಂದು ತಿಳಿಯಬಾರದು. ಅಥವಾ ನಾನು ಮಾಡಿದ ತಪ್ಪು ನನಗೊಬ್ಬನಿಗೇ ಗೊತ್ತು ಎಂದು ಬೀಗಲೂಬಾರದು. ಏಕೆಂದರೆ ಪ್ರತಿಕ್ಷಣ ನಾವು ಆಚರಿಸುವ ಪ್ರತಿಯೊಂದು ಕರ್ಮಗಳನ್ನು ಹನ್ನೆರಡು ಮಂದಿ ನೋಡುತ್ತಲೇ ಇರುತ್ತಾರೆ.
ಸೂರ್ಯ, ಚಂದ್ರ, ವಾಯು, ಅಗ್ನಿ, ಆಕಾಶ, ಭೂಮಿ, ಜಲ, ಹೃದಯ, ಯಮ, ಅಹೋರಾತ್ರಿಗಳು, ಎರಡು ಸಂಧ್ಯಾಕಾಲಗಳು ಮತ್ತು ಧರ್ಮಪುರುಷ ಇವರು ಪ್ರತಿಯೊಂದು ನಮ್ಮ ಸನ್ನಡತೆ, ದುರ್ನಡತೆಗಳಿಗೆ ಸಾಕ್ಷಿಯಾಗಿರುತ್ತಾರೆ.
ಒಳಿತಿಗಾಗಿ ಎಲ್ಲವನ್ನೂ ತ್ಯಾಗ ಮಾಡು: ಈಗಿನ ಕಾಲದಲ್ಲಿ ತಮ್ಮ ಒಳಿತನ್ನು ಮರೆತು ಬೇರೆ ಕೆಲಸದಲ್ಲಿ ಎಲ್ಲರೂ ನಿರಂತರಾಗಿದ್ದಾರೆ. ತಮ್ಮ ಒಳಿತನ್ನು ಮರೆತು ವಿಷಯಲೋಲುಪರಾಗಿದ್ದಾರೆ. ಇಂಥವರಿಗೆ ಸುಭಾಷಿತ ಎಚ್ಚರಿಸುತ್ತದೆ. ಕುಲದ ಹಿತಕ್ಕಾಗಿ ಒಬ್ಬನನ್ನು ತ್ಯಾಗ ಮಾಡಬೇಕಾಗುತ್ತದೆ. ಗ್ರಾಮದ ಹಿತಕ್ಕಾಗಿ ಕುಲವನ್ನೇ ತ್ಯಾಗ ಮಾಡಬೇಕು. ದೇಶದ ಹಿತಕ್ಕಾಗಿ ಗ್ರಾಮವನ್ನೇ ತ್ಯಾಗ ಮಾಡಬೇಕು. ಆತ್ಮನ ಹಿತಕ್ಕಾಗಿ ಸಮಸ್ತ ಪೃಥಿವೀಯನ್ನೇ ತ್ಯಾಗ ಮಾಡಬೇಕು.
ಯಾವುದೇ ಸತ್ಯ: ವೃದ್ಧರಿಲ್ಲದ ಜನಸಂದಣಿ ಸಭೆಯೇ ಅಲ್ಲ. ಧರ್ಮವನ್ನು ಯಾರು ಹೇಳುವುದಿಲ್ಲವೋ ಅವರು ವೃದ್ಧರೇ ಅಲ್ಲ. ಯಾವುದು ಸತ್ಯವಲ್ಲವೋ ಅದು ಧರ್ಮವೇ ಅಲ್ಲ. ಯಾವುದು ಹಠದಿಂದ ಕೂಡಿದೆಯೋ ಅದು ಸತ್ಯವೂ ಅಲ್ಲ. ಆದ್ದರಿಂದ ಮತ್ತೊಬ್ಬರಿಗೆ ಯಾವುದು ಹಿತವನ್ನು ಮಾಡುತ್ತದೆಯೋ ಅದೇ ಸತ್ಯ. ಅಹಿತವಾದ ಸತ್ಯ. ಸತ್ಯಯೆನಿಸದು. ಹಿತವಾದ ಸುಳ್ಳೂ ಕೂಡ ಸತ್ಯವೆನಿಸುವುದು.
ಒಂಟಿತನ ಒಳ್ಳೆಯದಲ್ಲ: ಒಂಟಿತನ ಎಲ್ಲೆಡೆಯೂ ಒಳ್ಳೆಯದಲ್ಲ. ಮಧುರ ಭಕ್ಷವನ್ನು ಒಬ್ಬನೇ ತಿನ್ನುವುದು ತಪ್ಪು. ದೊಡ್ಡ ಕಾರ್ಯವನ್ನು ಸಾಧಿಸಲು ಒಬ್ಬನೇ ಆಲೋಚಿಸುವುದು ತಪ್ಪು. ದೀರ್ಘಮಾರ್ಗವನ್ನು ಒಬ್ಬನೇ ಸಾಗುವುದು ತಪ್ಪು. ಎಲ್ಲರೂ ನಿದ್ರಿಸುವಾಗ ಒಬ್ಬನೇ ಎಚ್ಚರವಾಗಿರುವುದು ತಪ್ಪು. ಆದ್ದರಿಂದ ಒಂಟಿತನ ಎಲ್ಲೆಡೆಯೂ ಒಳ್ಳೆಯದಲ್ಲ.