ಕರಾವಳಿಯಲ್ಲಿ ಮತ್ತೊಮ್ಮೆ ವ್ಯಾಪಾರ ಬಹಿಷ್ಕಾರದ ಕೂಗು

Advertisement

ಮಂಗಳೂರು: ಕರಾವಳಿಯಲ್ಲಿ ಜಾತ್ರಾ ಮಹೋತ್ಸವಗಳು ಆರಂಭಗೊಳ್ಳುತ್ತಿದ್ದಂತೆಯೇ ಮತ್ತೊಮ್ಮೆ ವ್ಯಾಪಾರ ಬಹಿಷ್ಕಾರದ ಕೂಗು ಕೇಳಿ ಬಂದಿದೆ. ಹಿಂದೂಗಳಲ್ಲದವರಿಗೆ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂಬ ಆಗ್ರಹ ಕೇಳಿ ಬಂದಿದೆ.
ಕುಂದಾಪುರ ತಾಲೂಕಿನಲ್ಲಿ ನಡೆಯಲಿರುವ ಎರಡು ಮಹತ್ವದ ಜಾತ್ರೆಗಳಲ್ಲಿ ಈ ಬಹಿಷ್ಕಾರದ ಬಿಸಿ ತಟ್ಟಿದೆ. ಕರಾವಳಿಯಲ್ಲಿ ಅತಿ ದೊಡ್ಡ ಹಬ್ಬ ಎನಿಸಿರುವ ಕೋಟೇಶ್ವರದ ಕೊಡಿ ಹಬ್ಬ ಡಿ. 8 ರಂದು ನಡೆಯಲಿದ್ದರೆ. ಡಿ. 9ರಂದು ಉಪ್ಪುಂದ ಜಾತ್ರೆ ನಡೆಯಲಿದೆ. ಈಗಾಗಲೇ ಕೊಡಿ ಹಬ್ಬದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದ್ದು, ಆಡಳಿತ ಮಂಡಳಿಗೆ ಮನವಿಯನ್ನು ನೀಡಿದೆ.
ಹಿಂದೂ ಸಮಾಜದ ಮೇಲೆ ನಿರಂತರ ದಾಳಿ ಹಾಗೂ ದೇಶದಲ್ಲಿ ಭಯೋತ್ಪಾದನೆ, ಲವ್ ಜಿಹಾದ್‌ನಂತಹ ಪ್ರಕರಣ ಹೆಚ್ಚಿರುವ ಕಾರಣಕ್ಕೆ ಮುಸ್ಲಿಂ ವ್ಯಾಪಾರಿಗಳಿಗೆ ಹಿಂದೂ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ. ಈ ಹಿನ್ನೆಲೆ ಈಗಾಗಲೇ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿಯನ್ನು ಮಾಡಿದ್ದಾರೆ. ಕೋಟೇಶ್ವರದ ಜಾತ್ರೆಯಲ್ಲಿ ಅನ್ಯಧರ್ಮಿಯರಿಗೆ ಅವಕಾಶ ಇಲ್ಲ ಎಂದು ಈಗಾಗಲೇ ದೇವಸ್ಥಾನದ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ. ಸಹಾಯಕ ಕಮಿಷನರ್‌ಗೆ ನಿರ್ಣಯವನ್ನು ರವಾನೆ ಮಾಡಿದೆ.
ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಡಿ. 9ರಿಂದ ಜಾತ್ರೋತ್ಸವ ನೆರವೇರಲಿದೆ. ಜಾತ್ರೆ ದೇವಸ್ಥಾನದ ಆವರಣದಲ್ಲಿ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಹಿಂದೂ ಸಂಘಟನೆಗಳು ಮನವಿ ಮಾಡಿವೆ.