ಕಲಬುರಗಿ: ಕಲ್ಯಾಣ ಕರ್ನಾಟಕ ಸೇರಿದಂತೆ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ಹಾಗೂ ಐತಿಹಾಸಿಕ ಗತ ವೈಭವ ಸಾರುವ ಕಲ್ಯಾಣ ಕರ್ನಾಟಕ ಉತ್ಸವ -2023ರ ಮೆರವಣಿಗೆ ಶುಕ್ರವಾರ ಬೆಳಿಗ್ಗೆ ಆರಂಭಗೊಂಡಿತು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್, ಡೊಳ್ಳು ಬಾರಿಸಿ, ಬಾಣದಿಂದ ಬಿಲ್ಲು ಬಿಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ನಗರದ ಎಸ್.ಎಂ. ಪಂಡಿತ್ ರಂಗಮಂದಿರದಿಂದ ಸಾಗಿದ ಮೆರವಣಿಗೆ ಬಿಲಗುಂದಿ ವೃತ್ತ, ಕುಸನೂರ ರಸ್ತೆ ಮಾರ್ಗವಾಗಿ ಗುಲ್ಬರ್ಗಾ ವಿವಿ ಆವಣರ ತಲುಪಿತು. ಕೆಕೆಆರ್ ಡಿಬಿ ಕಾರ್ಯದಶಿ೯ ಅನಿರುದ್ಧ ಶ್ರವಣ್, ಜಿ.ಪಂ. ಸಿಇಓ ಡಾ. ಗಿರೀಶ್ ಬದೋಲೆ, ಕೆಕೆಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ವಿವಿಧ ಕಲಾ ಸಾಂಸ್ಕೃತಿಕ ತಂಡಗಳು ಭಾಗಿ:
ಕಲ್ಯಾಣ ಕರ್ನಾಟಕ ಉತ್ಸವದ ಮೆರವಣಿಗೆಯಲ್ಲಿ ನಾಡಿನ ಹಾಗೂ ಈ ಭಾಗದ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ತಮ್ಮ ಪ್ರದರ್ಶನ ನೀಡುವ ಮೂಲಕ ಮೆರವಣಿಗೆಗೆ ಕಳೆ ತಂದಿವೆ. ಶ್ರೀ ಮಂಜುನಾಥ ಹಗಲು ವೇಷ ಕಲಾವಿದ ತಂಡ, ತಮಟೆ ವಾದನ ತಂಡ, ಬಂಜಾರ ಮಹಿಳಾ ನೃತ್ಯ, ವೀರಗಾಸೆ ತಂಡ, ಡೊಳ್ಳು, ಹೆಜ್ಜೆ ಮೇಳ, ನಾಸಿಕ ಡೋಲ್, ಪೋತರಾಜ್ ವೇಷ, ಸ್ತಬ್ಧಚಿತ್ರ ಸೇರಿದಂತೆ ಹಲವು ಕಲಾ ತಂಡಗಳು ಗಮನ ಸೆಳೆದವು.