ಕಳೆ ನಾಶಕ ಸಿಂಪಡಿಸಲು ಹೋಗಿ ಪ್ರಾಣ ಕಳೆದುಕೊಂಡ ಅರಣ್ಯಾಧಿಕಾರಿ…

Advertisement

ಹುಬ್ಬಳ್ಳಿ: ಕಳೆ ನಾಶಕ ಸಿಂಪಡಿಸಲು ಹೋಗಿ ಅರಣ್ಯಾಧಿಕಾರಿಯೊಬ್ಬರು ಚಿಕಿತ್ಸೆ ಫಲಿಸದೆ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಮೃತ ಅರಣ್ಯಾಧಿಕಾರಿ ಕುಮಟಾ ತಾಲೂಕಿನ ಬಾಡ ಗ್ರಾಮದ ಯೋಗೇಶ ನಾಯಕ್. ಹಳಿಯಾಳ ವಿಭಾಗದ ಕುಳಗಿ ಶಾಖೆಯ ವಿರ್ನೋಲಿ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಯಕ್, ಕಳೆದ ಒಂದು ವಾರದಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅಧಿಕಾರಿ ಸಾವನ್ನಪ್ಪಿದ್ದಾರೆ.
ಇನ್ನೂ ದಾಂಡೇಲಿಯ ಹಲವೆಡೆ ಕಳೆದ 13 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಹೆಂಡತಿ ಮಗುವನ್ನು ಹೊಂದಿದ್ದ ಅಧಿಕಾರಿಯ ಕುಟುಂಬ ಅತಂತ್ರವಾಗಿದೆ. ಜೂನ್ 27 ರಂದು ಸಾಗವಾನಿ ಮಡಿ (ಟೀಕ್ ಬೆಡ್ )ಗೆ ಕಳೆನಾಶಕ ಹಾಕುವ ವೇಳೆ ಯಡವಟ್ಟಾಗಿದ್ದು, ಬೀಜಗಳನ್ನು ನೆಡುವ ಮುನ್ನ ತೋಡನ್ನು ತೆಗೆದು ಭೂಮಿಯೊಳಗೆ ಹದ ಮಾಡುವ ಕಾರ್ಯ ಮಾಡುತ್ತಿದ್ದ ವೇಳೆಯಲ್ಲಿ ಪ್ಯಾರಾಗ್ಯೂಟ್ ಎಂಬ ವಿಷಪೂರಿತ ಕೀಟ ನಾಶಕವನ್ನು ಸಾಗವಾನಿ ಮಡಿಯೊಳಗೆ ಸಿಂಪಡಿಸಿದ್ದ ನಾಯಕ್, ಕೈ ತೊಳೆದು ಕೊಳ್ಳದೆ ಊಟ, ನೀರು ಸೇವಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಅರಣ್ಯಾಧಿಕಾರಿ ಸಾವನ್ನಪ್ಪಿದ್ದಾರೆ.
ಕಳೆನಾಶಕ ಸಿಂಪಡಿಸಿ ಮನೆಗೆ ಬಂದ ಒಂದು ದಿನದ ನಂತರ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳೀಯ ಖಾಸಗಿ ವೈದ್ಯರನ್ನು ಸಂಪರ್ಕಿಸಿದಾಗ ಆಂಟಿಬಯಾಟಿಕ್ ಕೊಟ್ಟ ವೈದ್ಯರು, ಕಡಿಮೆಯಾಗದ ಕಾರಣ ಮರುದಿನ ಯೋಗೇಶ್ ನಾಯ್ಕ ತನ್ನ ಕಾರಲ್ಲೇ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅಲ್ಲಿಯೂ ಚಿಕಿತ್ಸೆ ಸಿಗಲು ಒಂದು ದಿನ ವಿಳಂಬ ಆಗಿದೆ ಎನ್ನಲಾಗಿದೆ. ಆದರೆ ಬೇರೆ ಕಡೆಯಲ್ಲಿ ಚಿಕಿತ್ಸೆ ನಡೆಸಿದಾಗ ಆಗಲೇ ಕಿಡ್ನಿ, ಲಿವರ್, ಲಂಗ್ಸ್ ಗಳು ಡ್ಯಾಮೇಜ್ ಆಗಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.