ಕಾಲ ಮಿತಿಮೀರಿದ ಕಡತಯಜ್ಞ

Advertisement

ಕೆ.ವಿ.ಪರಮೇಶ್
ಬೆಂಗಳೂರು :ಸರ್ಕಾರದ ಆಡಳಿತಯಂತ್ರ ಜಡ್ಡುಗಟ್ಟಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡಸಾಕ್ಷ್ಯ ಬೇಕಿಲ್ಲ. ನಿರ್ದಿಷ್ಟ ಅವಧಿಯೊಳಗೆ ಇಲಾಖೆಗಳ ಕಡತಗಳನ್ನು ವಿಲೇವಾರಿ ಮಾಡಬೇಕೆಂಬ ನಿಯಮವಿದ್ದರೂ ಅಧಿಕಾರಿಗಳಿಗೆ ಅದು ಲೆಕ್ಕಕ್ಕಿಲ್ಲ. ಇದರ ಪರಿಣಾಮ ವಿವಿಧ ಎಂಟು ಸಚಿವಾಲಯಗಳಲ್ಲಿ ಇಂದಿಗೂ ೨೫,೭೪೧ ಕಡತಗಳು ವಿಲೇವಾರಿಗೆ ಬಾಕಿ ಉಳಿದಿರುವುದು ಆಡಳಿತಶಾಹಿ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ.
ಜನಸ್ಪಂದನೆ ಕಡತಕ್ಕೂ ನಾಳೆಬಾ ಗತಿ: ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿಯೇ ಪ್ರಮುಖ ಕಡತಗಳು ತಿಂಗಳುಗಳಿಂದ ಧೂಳುಹಿಡಿಯುತ್ತಿವೆ. ಇದು ಉನ್ನತ ಅಧಿಕಾರಿಗಳಿಗೆ ತಿಳಿಯದ ಸಂಗತಿಯೂ ಅಲ್ಲ. ಆದರೆ ಇಚ್ಛಾಶಕ್ತಿ ಕೊರತೆಯೋ, ನಾಳೆ ಬಾ ಎನ್ನುವ ಉದಾಸೀನ ಮನೋಭಾವವೋ ೩ ರಿಂದ ೪ ತಿಂಗಳಿಂದ ಯಾವುದೇ ಕಡತ ಒಂದರಿಂದ ಮತ್ತೊಂದು ಕಚೇರಿಯಲ್ಲ ಟೇಬಲ್ ಕೂಡಾ ದಾಟಿಲ್ಲ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅತ್ಯಂತ ಕಾಳಜಿಯಿಂದ ನಿರ್ವಹಿಸಿದ್ದ ಜನಸ್ಪಂದನ ಕಾರ್ಯಕ್ರಮದ ಕಡತಗಳೂ ಸೇರಿವೆ ಎನ್ನುವುದು ಉಲ್ಲೇಖಾರ್ಹ.
೧೫ ಸಾವಿರದಷ್ಟು ಅಧಿಕ ಪೆಂಡಿಂಗ್: ಮೂಲಗಳ ಅಧಿಕೃತ ಮಾಹಿತಿಯಂತೆ ೨೫,೭೪೧ ಕಡತಗಳ ಪೈಕಿ ೯೭೧೧ ಕಡತಗಳು ವಿವಿಧ ಹಂತದಲ್ಲಿ ಕುಂಟುತ್ತಾ ತೆವಳುತ್ತಾ ಸಾಗಿವೆ. ಆದರೆ ೧೫,೦೦೦ಕ್ಕೂ ಅಧಿಕ ಕಡತಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಳ್ಳದ ಪರಿಣಾಮ ಸಚಿವಾಲಯ ಅಧಿಕಾರಿಗಳ ಮಟ್ಟದಲ್ಲಿಯೇ ಸ್ಥಗಿತವಾಗಿವೆ. ಇವುಗಳಲ್ಲಿ ಪ್ರಮುಖ ಇಲಾಖೆಗಳಿಗೆ ಸಂಬಂಧಿಸಿ ಕಡತಗಳೇ ಹೆಚ್ಚಿನ ಪ್ರಮಾಣದಲ್ಲಿ ಸೇರಿಕೊಂಡಿದೆ. ಖುದ್ದು ಮುಖ್ಯಕಾರ್ಯದರ್ಶಿಯೇ ಆಯಾ ಇಲಾಖಾ ಪ್ರಧಾನ ಕಾರ್ಯದರ್ಶಿ ಮತ್ತು ನಿಯೋಜಿತ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸ್ಪಷ್ಟಸೂಚನೆ ರವಾನಿಸಿದ್ದರೂ ಫೈಲ್‌ಗಳು ಸ್ಥಳ ಕದಲಿಸದಿರುವುದು ವ್ಯವಸ್ಥೆಯ ದುರಂತ.
ಯರ‍್ಯಾರ ಖಾತೆ ಕಡತಗಳು: ಸಿಎಂ ಉಸ್ತುವಾರಿಯಲ್ಲಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಡಿಸಿಎಂ ನಿರ್ವಹಣೆಯ ಜಲಸಂಪನ್ಮೂಲ, ಸತೀಶ್ ಜಾರಕಿಹೊಳಿ ಮಂತ್ರಿಯಾಗಿರುವ ಲೋಕೋಪಯೋಗಿ, ಕೃಷ್ಣಬೈರೇಗೌಡ ಸಚಿವರಾಗಿರುವ ಕಂದಾಯ, ಪ್ರಿಯಾಂಕ್ ಖರ್ಗೆ ಉಸ್ತುವಾರಿಯ ಗ್ರಾಮೀಣಾಭಿವೃದ್ಧಿ, ಬೈರತಿ ಸುರೇಶ್ ಸಚಿವರಾಗಿರುವ ನಗರಾಭಿವೃದ್ಧಿ, ಕೆ.ಜೆ.ಜಾರ್ಜ್ ಮಂತ್ರಿಯಾಗಿರುವ ಇಂಧನ ಖಾತೆಯಂತಹ ಮಹತ್ವದ ಇಲಾಖೆಗಳಲ್ಲಿಯೇ ತಿಂಗಳುಗಟ್ಟಲೆ ಮಹತ್ವದ ಕಡತಗಳು ವಿಲೇವಾರಿಯಾಗದೆ ಕೊಳೆಯುತ್ತಿವೆ.
ನೀತಿಸಂಹಿತೆ ನೆಪವೂ ಇಲ್ಲ: ಪಗ್ರತಿಯಲ್ಲಿರುವ ಅಥವಾ ಮೂಲಸೌಕರ್ಯ ಇಲ್ಲವೇ ಜನಕಲ್ಯಾಣ ಯೋಜನೆಗಳ ಕಡತಗಳ ವಿಲೇವಾರಿಗೆ ಚುನಾವಣಾ ನೀತಿ ಸಂಹಿತೆಯ ಗೊಡವೆ ಇಲ್ಲ. ಹಾಗಿದ್ದೂ ಕಡತಗಳ ಚಲಿಸದಿರುವುದು ಅಧಿಕಾರಿಗಳ ನಿಸ್ತೇಜ ಮನಸ್ಥಿತಿಯೇ ಕಾರಣವೇ ಹೊರತು ಸಮರ್ಥಿಸಿಕೊಳ್ಳಬಹುದಾದ ಯಾವುದೇ ಗುರುತರ ಕಾರಣಗಳಿಲ್ಲ. ಸಿಎಂ, ಡಿಸಿಎಂ ಇಲ್ಲವೇ ಸಚಿವರು ಈ ಕಡತಗಳ ವಿಲೇವಾರಿಗೆ ಅಡ್ಡಿಪಡಿಸಬಹುದಾದ ಪ್ರಸಂಗವೂ ಎದುರಾಗದು. ಹಾಗಿದ್ದೂ ವಿಲೇ ವಾರಿಯಾಗದಿರುವುದು ಮಾತ್ರ ಜನಹಿತದ ದೃಷ್ಟಿಯಿಂದ ಪ್ರಶ್ನಾರ್ಹವಾಗಿದೆ.