ಕಾವೇರಿ ವಿಚಾರದಲ್ಲಿ ಕನ್ನಡಿಗರಿಗೆ ನಿರಂತರ ಮೋಸ

Advertisement

ಮಂಡ್ಯ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನಡೆಸುತ್ತಿರುವ ನಿರಂತರ ಧರಣಿಯಲ್ಲಿ ಭಾಗಿಯಾಗುವ ಮೂಲಕ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಮತ್ತು ಅವರ ಪುತ್ರ ನಟ ವಿನೋದ್ ರಾಜ್ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ನಗರದ ಸರ್ ಎಂವಿ ಪ್ರತಿಮೆ ಎದುರಿನ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಅವರು ಇಳಿ ವಯಸ್ಸಿನಲ್ಲಿಯೂ ಹೋರಾಟ ಮಾಡುವ ಮೂಲಕ ಕಾವೇರಿ ಚಳವಳಿಗೆ ಸ್ಫೂರ್ತಿಯಾದರು.
ನಟಿ ಲೀಲಾವತಿ, ವಿನೋದ್ ರಾಜ್ ಬಂದೊಡನೆ ಹಿತರಕ್ಷಣ ಸಮಿತಿಯ ಸದಸ್ಯರು ಆತ್ಮೀಯವಾಗಿ ಬರಮಾಡಿಕೊಂಡು ಪ್ರೀತಿ ತೋರಿದರು, ಅವರು ಸಹ ರೈತರ ಹೋರಾಟದಲ್ಲಿ ಭಾಗಿಯಾಗಿರುವುದಕ್ಕೆ ಸಾರ್ಥಕ ಮನೋಭಾವ ವ್ಯಕ್ತಪಡಿಸಿ ಕಾವೇರಿ ಮಾತೆ ರೈತರಿಗೆ ನ್ಯಾಯ ದೊರಕಿಸಿಕೊಡಲಿ ಎಂದು ಆಶಿಸಿದರು.
ನಟ ವಿನೋದ್ ರಾಜ್ ಮಾತನಾಡಿ, ಕನ್ನಂಬಾಡಿಯಿಂದ ಬೆಂಗಳೂರಿನವರೆಗೆ ಕನ್ನಡಿಗರು ಕಾವೇರಿ ನೀರನ್ನು ಆಶ್ರಯಿಸಿ ಬದುಕುತ್ತಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಮಳೆಯ ಕೊರತೆಯಿಂದ ನೀರಿನ ಅಭಾವ ಇದೆ. ವರುಣ ಇನ್ನೂ ಸಹ ಕೃಪೆ ತೋರಿಲ್ಲ, ಕಳೆದ 15 ವರ್ಷದಿಂದ ಕಾವೇರಿ ವಿಚಾರದಲ್ಲಿ ಕರ್ನಾಟಕ ಮತ್ತು ಮಂಡ್ಯ ಜಿಲ್ಲೆಯ ಜನತೆ ಸಾಕಷ್ಟು ನೋವು ಅನುಭವಿಸಿದ್ದು, ಇದು ನೋವಿನ ಸಂಗತಿ ಎಂದರು.
ಕಾವೇರಿ ವಿಚಾರದಲ್ಲಿ ಮಲತಾಯಿ ಧೋರಣೆ ಮುಂದುವರೆದಿದೆ. ನಿರಂತರ ಮೋಸ, ದ್ರೋಹ ಮಾಡಲಾಗಿದೆ. ಇಂತಹ ಸ್ಥಿತಿ ಬರಬಾರದು. ವಾಸ್ತವ ಪರಿಸ್ಥಿತಿಯನ್ನು ಎಲ್ಲರೂ ಅರಿಯಬೇಕು. ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಕ್ಷೇಮ ಮುಖ್ಯ, ನೀರಿನ ವಿಚಾರದಲ್ಲಿ ಲೆಕ್ಕಾಚಾರ ಅಲ್ಲ, ನನಗೆಷ್ಟು ನಿಮಗೆಷ್ಟು ಎಂದು ಹೇಳಲಾಗದು ಎಂದರು.
ಕಾವೇರಿ ಹೋರಾಟ ಜಾತ್ಯತೀತ, ಪಕ್ಷಾತೀತವಾದದ್ದು, ಕಾವೇರಿ ನೀರು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾದದ್ದಲ್ಲ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪರಿಸ್ಥಿತಿಯನ್ನ ಅರಿಯಬೇಕು ಮುಂದಿನ ದಿನಗಳಲ್ಲಿ ಕುಡಿಯಲು ನೀರಿಲ್ಲದ ಸಂಕಷ್ಟದ ದಿನಗಳು ಎದುರಾಗಲಿವೆ ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ವಾಸ್ತವ ಪರಿಸ್ಥಿತಿಯನ್ನ ಅರಿತು ಆದೇಶ ನೀಡಬೇಕು ಎಂದು ಮನವಿ ಮಾಡಿದರು.
ಇಷ್ಟೊಂದು ಹೋರಾಟ ಮಾಡುವ ನಾವುಗಳು ಮಳೆ ಬಂದರೆ ಎಲ್ಲವನ್ನು ಮರೆತು ಬಿಡುತ್ತೇವೆ, ಮಳೆ ಬಂದಾಗಲೂ ನೀರು ಇದ್ದಾಗಲೂ ಮುನ್ನೆಚ್ಚರಿಕೆ ವಹಿಸಿ ಮುನ್ನಡೆಬೇಕು, ಕಾವೇರಿ ವಿಚಾರದಲ್ಲಿ ಸದಾ ಕಾಲ ಜಾಗೃತಿಯಲ್ಲಿರಬೇಕು ಎಂದರು.
ಸದ್ಯದ ಸಂಕಷ್ಟ ಸ್ಥಿತಿಯಿಂದ ಭುವನೇಶ್ವರಿ ತಾಯಿ, ಚಾಮುಂಡೇಶ್ವರಿ ಕಾವೇರಿ ಮಾತೆ ಪಾರು ಮಾಡಿ ಕನ್ನಡಿಗರು ಮತ್ತು ರೈತರನ್ನ ಕಾಪಾಡಲಿ ಎಂದು ಹೇಳಿದರು.
ರೈತನ ಸ್ಥಿತಿ ಪ್ರತಿನಿತ್ಯ ಸಂಕಷ್ಟ ಎದುರಿಸುವಂತಾಗಿದೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಇದೀಗ ಬೆಳೆ ಹಾಕದ ಪರಿಸ್ಥಿತಿ ಎದುರಾಗಿದೆ, ಅರಣ್ಯ ಇಲಾಖೆ ರೈತರನ್ನ ಒಕ್ಕಲಿಬ್ಬಿಸುತ್ತಿದೆ, ಕಷ್ಟ ಎಂದು ಜಮೀನು ಮಾರಾಟ ಮಾಡುವಂತದ್ದಲ್ಲ ಆಳುವ ಸರ್ಕಾರ ರೈತನ ಪರಿಸ್ಥಿತಿ ಅರಿಯಬೇಕೆಂದರು.