ಕ್ಷೀರಭಾಗ್ಯ ದಶಮಾನೋತ್ಸವ ಸಂಭ್ರಮ

Advertisement

ಬೆಂಗಳೂರು: ಕ್ಷೀರಭಾಗ್ಯ ಯೋಜನೆ ದಶಮಾನೋತ್ಸವ ಕಂಡಿದ್ದು, ಇಂದು ಮಧುಗಿರಿಯಲ್ಲಿ ರಾಜ್ಯಮಟ್ಟದ ಕ್ಷೀರಭಾಗ್ಯ ದಶಮಾನೋತ್ಸವ ಸಮಾರಂಭ ಆಯೋಜಿಸಲಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ. ರಾಜ್ಯಮಟ್ಟದ ಕ್ಷೀರಭಾಗ್ಯ ದಶಮಾನೋತ್ಸವ ಸಂಭ್ರಮಾಚರಣೆಗೆ ಮಧುಗಿರಿ ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಭವ್ಯ, ಬೃಹತ್ ವೇದಿಕೆ ಸಿದ್ಧವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೀರಭಾಗ್ಯ ಯೋಜನೆ ದಶಮಾನೋತ್ಸವ ಟ್ವೀಟ್‌ ಮಾಡಿದ್ದಾರೆ. ಅವರು ತಮ್ಮ ಟ್ವೀಟ್‌ನಲ್ಲಿ “ಶಾಲಾ ವಿದ್ಯಾರ್ಥಿಗಳಿಗೆ ಬಿಸಿ ಹಾಲು ನೀಡುವ ಕ್ಷೀರಭಾಗ್ಯ ಯೋಜನೆಗೆ ಈಗ ದಶಮಾನೋತ್ಸವದ ಸಂಭ್ರಮ. ಈ ಸಡಗರವನ್ನು ಶಾಲೆಗಳಲ್ಲಿ ಖುಷಿಖುಷಿಯಾಗಿ ಹಾಲು ಕುಡಿಯುತ್ತಿರುವ ಮಕ್ಕಳ ಮುಖಗಳಲ್ಲಿ ನಾನು ಕಾಣುತ್ತಿದ್ದೇನೆ.
ಒಂದನೇ ತರಗತಿಯಲ್ಲಿ ಬಿಸಿ ಹಾಲು ಕುಡಿಯಲಾರಂಭಿಸಿದ ಮಗುವೊಂದು ಈಗ ಹತ್ತನೇ ತರಗತಿಯ ಪ್ರೌಡ ವಿದ್ಯಾರ್ಥಿಯಾಗಿ ಕ್ಷೀರಭಾಗ್ಯ ಯೋಜನೆಯಿಂದ ತನ್ನ ದೇಹಕ್ಕೆ ಬಲ ಬಂತು, ಓದಲು ಹುಮ್ಮಸ್ಸು ಬಂತು ಎಂದೆಲ್ಲ ಹೇಳುತ್ತಿರುವುದನ್ನು ಕೇಳಿದಾಗ ಯೋಜನೆಯ ಉದ್ದೇಶ ಸಾರ್ಥಕವಾಯಿತು ಎಂದು ಅನಿಸುತ್ತದೆ.
ಅಪೌಷ್ಟಿಕತೆ ನಿವಾರಣೆಯ ಜೊತೆಗೆ ಕಲಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ 2013ರಲ್ಲಿ ನಮ್ಮ ಸರ್ಕಾರವು ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೊಳಿಸಿತ್ತು. ಕ್ಷೀರಭಾಗ್ಯ ಜಾರಿಗೊಂಡ ನಂತರದಿಂದ ಶಾಲಾ ಮಕ್ಕಳ ಪೌಷ್ಟಿಕ ಮಟ್ಟ ಸುಧಾರಣೆಯಾಗಿದೆ, ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಾಗಿದೆ ಮತ್ತು ರಾಜ್ಯದ ಹಾಲು ಉತ್ಪಾದಕ ಒಕ್ಕೂಟಗಳಿಗೂ ಬಲ ಬಂದಿದೆ ಎನ್ನುವುದನ್ನು ತಿಳಿಸಲು ಹೆಮ್ಮೆಯಾಗುತ್ತದೆ ಎಂದಿದ್ದಾರೆ.