ಖರ್ಗೆ ಅಧ್ಯಕ್ಷರಾಗ್ತಾರೆ ಅಂತಾ ಡಿಕೆಶಿ, ಸಿದ್ದರಾಮಯ್ಯಗೆ ಭಯ: ಕಟೀಲ್

ಕಟೀಲ್
Advertisement

ಗದಗ: ಹಿಂದೆ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದ ಸಿದ್ದರಾಮಯ್ಯಗೆ ಎಐಸಿಸಿ ಅಧ್ಯಕ್ಷರಾಗಲಿರುವ ಮಲ್ಲಿಕಾರ್ಜುನ ಖರ್ಗೆ ಭಯ ಕಾಡುತ್ತಿದೆಯೆಂದು ಬಿಜೆಪಿ ಅಧ್ಯಕ್ಷ ನಳೀನಕುಮಾರ ಕಟೀಲ್ ಲೇವಡಿ ಮಾಡಿದರು.
ಗಜೇಂದ್ರಗಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರಗೆ ಸ್ಪರ್ಧಿಸಲು ಟಿಕೆಟ್ ದೊರೆಯುವ ಬಗ್ಗೆಯೇ ಅನುಮಾನವಾಗಿದೆ. ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆಗೆ ದೋಖಾ ಮಾಡಿ ಸಿಎಂ ಸ್ಥಾನಕ್ಕೆ ಏರಲಿಕ್ಕೆ ಬಿಡದೇ ದಲಿತ ಮುಖ್ಯಮಂತ್ರಿ ಆಗಲು ಅಡ್ಡಗಾಲು ಹಾಕಿದ್ದಾರೆ. ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ಒಳ ಒಪ್ಪಂದ ಮಾಡಿಕೊಂಡು ಅನೈತಿಕ ರಾಜಕಾರಣ ಮಾಡಿದ್ದಾರೆ. ಈಗ ಈ ಇಬ್ಬರೂ ನಾಯಕರಿಗೆ ಭಯ ಪ್ರಾರಂಭವಾಗಿದೆಯೆಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ವಿರೋಧ ಪಕ್ಷಗಳು ಮಾಡಿರುವ 40 ಪರ್ಸೆಂಟ್ ಆರೋಪ ಆಧಾರ ರಹಿತ. ಸಿದ್ದರಾಮಯ್ಯ ನ್ಯಾಯವಾದಿಗಳಾಗಿದ್ದವರು. ಸಾಕ್ಷಿ ಪುರಾವೆಯಿಲ್ಲದೇ ಆರೋಪ ಮಾಡಬಾರದು.. ಸಿದ್ದರಾಮಯ್ಯ ಕಾಲದ ಅರ್ಕಾವತಿ ಪುರಾವೆಗಳು ನಮ್ಮ ಬಳಿ ಇವೆ.. ಬೆಡ್‌ಶೀಟ್ ಹಗರಣ, ಮೊಟ್ಟೆ ಹಗರಣಗಳ ದಾಖಲೆಗಳಿವೆ. ದಾಖಲೆಗಳೊಂದಿಗೆ ಮಾತನಾಡುತ್ತೇವೆ. ಭ್ರಷ್ಟಾಚಾರದ ಮೂಲ ಕೇಂದ್ರವೇ ಕಾಂಗ್ರೆಸ್ ಪಕ್ಷ. ¨ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್. ಕಾಂಗ್ರೆಸ್‌ನ ಎಲ್ಲ ನಾಯಕರು ಬೇಲ್ ಮೇಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲರೂ ಜೈಲ್‌ಗೆ ಹೋಗುವವರು ಎಂದು ಡಿಕೆಶಿ, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.