ಗಣರಾಜ್ಯೋತ್ಸವ ಪರೇಡ್‌ನಲ್ಲಿ ನೌಕಾಪಡೆ ತಂಡವನ್ನು ಮುನ್ನಡೆಸಿದ ಮಂಗಳೂರಿನ ಕುವರಿ

Advertisement

ಮಂಗಳೂರು: ಹೊಸ ದಿಲ್ಲಿಯಲ್ಲಿ ಇಂದು ನಡೆದ 74 ನೇ ಗಣರಾಜ್ಯೋತ್ಸವ ಸಂದರ್ಭ ಭಾರತೀಯ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿರುವ ಮಂಗಳೂರಿನ ಕುವರಿ ದಿಶಾ ಅಮೃತ್ ಅವರು ನೌಕಾಪಡೆ ತಂಡವನ್ನು ಮುನ್ನಡೆಸಿದರು.
ಈ ತುಕಡಿಯು 144 ಯುವ ನಾವಿಕರನ್ನು ಒಳಗೊಂಡಿತ್ತು. ತುಕಡಿಯಲ್ಲಿ ನಾರಿ ಶಕ್ತಿ ಸ್ತಬ್ದಚಿತ್ರವಿದ್ದು, ಇದರಲ್ಲಿ ಮೂವರು ಮಹಿಳಾ ಅಧಿಕಾರಿಗಳು ಮತ್ತು ಐವರು ಪುರುಷ ಅಗ್ನಿವೀರ್‌ಗಳು ಭಾಗವಹಿಸಿದ್ದರು. ಅಮೃತ್ ಜೊತೆಗೆ, ಮತ್ತೊಬ್ಬ ಮಹಿಳಾ ಅಧಿಕಾರಿ, ಸಬ್ ಲೆಫ್ಟಿನೆಂಟ್ ನಲ್ಲಿ ಮೀನಾ ಎಸ್ ಕೂಡಾ ಜೊತೆಯಲ್ಲಿದ್ದರು.
ಹರೆಯದ ದಿಶಾ ಅಮೃತ್ ಲೆಫ್ಟಿನೆಂಟ್ ಕಮಾಂಡರ್ ನೌಕಾ ವಾಯು ಕಾರ್ಯಾಚರಣೆಯ ಅಧಿಕಾರಿಯಾಗಿದ್ದು, ಅಂಡಮಾನ ಮತ್ತು ನಿಕೋಬಾರ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು 2008 ರಲ್ಲಿ ನ್ಯಾಷನಲ್ ಕೆಡೆಟ್ ಕಾರ್ಪ್ಸ್ ನ ಗಣರಾಜ್ಯೋತ್ಸವ ತಂಡದ ಭಾಗವಾಗಿದ್ದರು.
ದಿಶಾ ಅಮೃತ್ ಅವರು ಮಂಗಳೂರಿನ ಬೋಳೂರು ಸಮೀಪದ ತಿಲಕ್‌ ನಗರದ ಅಮೃತ್‌ ಕುಮಾರ್‌ ಮತ್ತು ಲೀಲಾ ಅಮೃತ್‌ ದಂಪತಿಯ ಪುತ್ರಿ. ಇವರು 2016 ರಲ್ಲಿ ನೌಕಾಪಡೆಗೆ ಸೇರಿದ್ದು, 2017 ರಲ್ಲಿ ತನ್ನ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.