ಗಾಂಜಾ ಕಾರ್ಯಾಚರಣೆ ವೇಳೆ ಪೊಲೀಸರ ಮೇಲೆ ಹಲ್ಲೆ: ಸಿಪಿಐ ಗಂಭೀರ

ಪೊಲೀಸರ ಮೇಲೆ ದಾಳಿ
Advertisement

ಪೊಲೀಸರ ಮೇಲೆಯೇ ಮಾರಣಾಂತಿಕ ದಾಳಿ ಮಾಡುವ ಮೂಲಕ ಗಾಂಜಾ ದಂಧೆಕೋರರು ಅಟ್ಟಹಾಸ ಮೆರೆದಿರುವ ಘಟನೆ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಹೊನ್ನಾಳಿ ಗ್ರಾಮದಲ್ಲಿ ನಡೆದಿದೆ.
ಶುಕ್ರವಾರ ಕಾರ್ಯಾಚರಣೆಗೆ ತೆರಳಿದ್ದ ಪೊಲೀಸರ ಮೇಲೆ ಸುಮಾರು 40 ಜನ ದುಷ್ಕರ್ಮಿಗಳು ಹಲ್ಲೆ ಮಾಡಿದ್ದು, ಘಟನೆಯಲ್ಲಿ ಕಮಲಾಪುರ ಸಿಪಿಐ ಶ್ರೀಮಂತ ಇಲ್ಲಾಳ ಅವರಿಗೆ ಹೊಟ್ಟೆ, ತಲೆ ಹಾಗೂ ದೇಹದ ಹಲವಡೆ ಗಂಭೀರವಾಗಿ ಗಾಯಗಳಾಗಿದ್ದು, ಬಸವಕಲ್ಯಾಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ತಡರಾತ್ರಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಕಮಲಾಪುರ ತಾಲೂಕಿನ ದಸ್ತಾಪುರ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಕಲಬುರಗಿಯ ನವೀನ ಹಾಗೂ ಬಸವಕಲ್ಯಾಣ ತಾಲೂಕು ಭೋಸಗಾದ ಸಂತೋಷ ಎಂಬಾತನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಇವರು ನೀಡಿದ ಮಾಹಿತಿ ಆಧಾರದ ಮೇಲೆ ಗಾಂಜಾ ಬೆಳೆಯ ಮೂಲಸ್ಥಾನ ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಹೊನ್ನಾಳಿ ಜಮೀನೊಂದರ ಮೇಲೆ ಕಮಲಾಪುರ ಸಿಪಿಐ ಶ್ರೀಮಂತ ಇಲ್ಲಾಳ ನೇತೃತ್ವದ 10 ಜನರ ತಂಡ ದಾಳಿ ನಡೆಸಿತ್ತು. ಈ ವೇಳೆ ಕಟ್ಟಿಗೆ, ಕಲ್ಲು ಸಮೇತ ದಿಢೀರನೇ ಪ್ರತ್ಯಕ್ಷವಾದ ಸುಮಾರು 40 ಜನ ದುಷ್ಕರ್ಮಿಗಳ ತಂಡ ಕೈಗೆ ಸಿಕ್ಕ ಪೊಲೀಸರ ಮೇಲೆ ಹಲ್ಲೆ ನಡೆಸಿದೆ.