ಗುಂಡು ಹಾರಿಸಿ ಪತ್ನಿಗೆ ಬೆದರಿಸಿದ ಪತಿ ಅಂದರ್

ಪತ್ನಿಗೆ ಬೆದರಿಸಿದ ಪತಿ
Advertisement

ಅಥಣಿ : ತವರಿನಿಂದ ವಾಪಸ್ ಬರಲು ಒಪ್ಪದ ಪತ್ನಿಯತ್ತ ಪತಿ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ಬಂಧಿಸಲಾಗಿದೆ.
ವಿಜಯಪುರ ಜಿಲ್ಲೆ ಸಿಂಧಗಿಯ ಶಿವಾನಂದ ಕಾಲೆಬಾಗ ಗುಂಡು ಹಾರಿಸಿದ ಆರೋಪಿ. ಈತನ ಪತ್ನಿ ಪ್ರೀತಿ ಅಥಣಿ ಠಾಣೆಯಲ್ಲಿ ದೂರು ನೀಡಿದ್ದರು.
ಅಥಣಿಯ ಪ್ರೀತಿಯನ್ನು ಸಿಂಧಗಿಯ ಶಿವಾನಂದನಿಗೆ ೪ ವರ್ಷದ ಹಿಂದೆ ಮದುವೆ ಮಾಡಿ ಕೊಟ್ಟಿದ್ದರು. ಕೆಲವು ತಿಂಗಳು ಚನ್ನಾಗಿ ಜೀವನ ಮಾಡಿಕೊಂಡಿದ್ದ ಆರೋಪಿ ಬಳಿಕ ಬೇರೊಂದು
ಮಹಿಳೆಯೊಂದಿಗೆ ಸಂಬಂಧ ಬೆಳೆಸಿದ್ದ. ಇದರಿಂದ ಬೇಸತ್ತ ಪ್ರೀತಿ ಅಥಣಿಯ ತವರು ಮನೆಗೆ ಬಂದು ವಾಸವಾಗಿದ್ದಳು. ಈ ದಂಪತಿಗೆ ಮೂರು ವರ್ಷದ ಮಗುವೂ ಇದೆ. ಆದರೆ ಆ. 12ರಂದು ಪ್ರೀತಿಯ ತವರು ಮನೆಯಾದ ಅಥಣಿಗೆ ಬಂದ ಆರೋಪಿ ಪತಿ ತನ್ನಲ್ಲಿದ್ದ ರಿವಾಲ್ವರ ತೋರಿಸಿ ಬೆದರಿಸಿ ತನ್ನ ಜತೆ ವಾಪಸ್ ಬರುವಂತೆ ಧಮಕಿ ಹಾಕಿದ್ದ. ಅಲ್ಲದೇ ರಿವಾಲ್ವರಿನಿಂದ ಎರಡು ಗುಂಡು ಹಾರಿಸಿದ್ದಾನೆ. ತನ್ನ ಜತೆ ಬರದಿದ್ದರೆ ರಿವಾಲ್ವರಿನಲ್ಲಿರುವ ಉಳಿದ ಗುಂಡುಗಳನ್ನು ನಿನ್ನ ತಲೆಗೆ ಹೊಡೆಯುತ್ತೇನೆ ಎಂದು ಧಮಕಿ ಹಾಕಿದ್ದಾನೆ.
ಹೆದರಿದ ಪ್ರೀತಿ ಅಥಣಿ ಠಾಣೆಗೆ ದೂರು ನೀಡಿದ್ದಾಳೆ. ಆರೋಪಿಯ ರಿವಾಲ್ವರ್ ಬಿಜಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಮಾತ್ರ ಬಳಸಲು ಅನುಮತಿಯಿರುವುದು ಮತ್ತು ಪತ್ನಿಯೆಡೆಗೆ ಗುಂಡು ಹಾರಿಸಿ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ರಿವಾಲ್ವರ್ ವಶಕ್ಕೆ ಪಡೆದಿದ್ದಾರೆ.