ಗುತ್ತಿಗೆದಾರನ 26 ಲಕ್ಷ ಹಣ ದೋಚಿ ಪರಾರಿ

Advertisement

ಹುಬ್ಬಳ್ಳಿ: ಪುಣೆ ಮೂಲದ ಗುತ್ತಿಗೆದಾರನ ಬಳಿ ೨೬ ಲಕ್ಷ ರೂಪಾಯಿ ಹಣ ಇದ್ದ ಬ್ಯಾಗನ್ನು ಸ್ಕೂಟಿಯಲ್ಲಿ ಬಂದ ಇಬ್ಬರು ದೋಚಿಕೊಂಡು ಹೋದ ಘಟನೆ ರವಿವಾರ ಮಧ್ಯಾಹ್ನ ನಗರದ ಗೋಕುಲ ರಸ್ತೆಯ ಸೆಕ್ಯುರ್ ಆಸ್ಪತ್ರೆಯ ಹತ್ತಿರ ನಡೆದಿದೆ.
ಹಣ ಕಳೆದುಕೊಂಡ ಗುತ್ತಿಗೆದಾರ ಪುಣೆಯ ಧೀರಜ್. ಇವರು ಹಾಸನದಲ್ಲಿ ಗುತ್ತಿಗೆ ಪಡೆದು ನಿರ್ವಹಿಸುತ್ತಿರುವ ಕಾಮಗಾರಿಗೆ ಕಾರ್ಮಿಕರ ಕೊರತೆ ಇದ್ದುದ್ದರಿಂದ ಹುಬ್ಬಳ್ಳಿಯಿಂದ ಕಾರ್ಮಿಕರನ್ನು ಕರೆದುಕೊಂಡು ಹೋಗಲು ನಗರದ ಕಾರ್ಮಿಕ ಗುತ್ತಿಗೆದಾರರನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಈ ವಿಷಯ ಕುರಿತು ಕಾರ್ಮಿಕ ಗುತ್ತಿಗೆದಾರನೊಂದಿಗೆ ಮಾತುಕತೆ ನಡೆಸಲು ಹಣದೊಂದಿಗೆ ತಮ್ಮ ಇನ್ನೊಬ್ಬ ಆಪ್ತರೊಂದಿಗೆ ನಗರಕ್ಕೆ ಬಂದಿದ್ದರು ಎನ್ನಲಾಗಿದೆ.
ಹೀಗೆ ಬಂದ ವೇಳೆ ಗೋಕುಲ ರಸ್ತೆಯ ಸೆಕ್ಯುರ್ ಆಸ್ಪತ್ರೆ ಬಳಿ ತೆರಳುವಾಗ ಸ್ಕೂಟಿಯಲ್ಲಿ ಬಂದ ಇಬ್ಬರು ಇವರ ಕೈಯಲ್ಲಿದ್ದ ಹಣದ ಬ್ಯಾಗ್ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದಿದೆ.
ಈ ಕುರಿತು ಗೋಕುಲ ರೋಡ ಪೊಲೀಸ್ ಠಾಣೆಯಲ್ಲಿ ಹಣ ಕಳೆದುಕೊಂಡವರು ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳದಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ.
ಹಣ ಏತಕ್ಕೆ ತಂದಿದ್ದರು, ಒಟ್ಟಾರೆ ಎಷ್ಟು ಹಣ ಇತ್ತು. ಆರೋಪಿತರು ಯಾರು ಎಂಬ ಕುರಿತು ಪೊಲೀಸ್ ತನಿಖೆಯ ನಂತರ ಮಾಹಿತಿ ದೊರೆಯಬೇಕಿದೆ.