ಗುತ್ತಿಗೆದಾರರಿಗೆ ಪಾವತಿಯಾಗದ ಹಣ: ದಯಾಮರಣ ಕೋರಿ ಮನವಿ ಸಲ್ಲಿಸಲು ನಿರ್ಧಾರ

Advertisement

ಬೆಂಗಳೂರು: ಬಿಬಿಎಂಪಿಯಲ್ಲಿ ಹಣ ಲಭ್ಯವಿದ್ದರೂ ಸುಮಾರು 26 ತಿಂಗಳುಗಳಿಂದ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಗಳಿಗೆ ಹಣ ಪಾವತಿ ಮಾಡಿಲ್ಲ. ಕೂಡಲೇ ನಮಗೆ ಹಣ ಬಿಡುಗಡೆ ಮಾಡಿ. ಇಲ್ಲವಾದರೆ 500 ಜನ ಬಿಬಿಎಂಪಿ ಗುತ್ತಿಗೆದಾರರಿಗೆ ದಯಾಮರಣ ಕರುಣಿಸುವಂತೆ ರಾಷ್ಟ್ರಪತಿಗೆ ಪತ್ರ ಬರೆಯುತ್ತೇವೆ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಮಗಾರಿ ಬಿಲ್ಲು ಬಿಡುಗಡೆ ಮಾಡುವ ಕುರಿತು ಮುಖ್ಯ ಆಯುಕ್ತರಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ಬಿಬಿಎಂಪಿಯ ಹಲವು ಕಾಮಗಾರಿಗಳನ್ನು ಮಾಡಿದರೂ ನಮಗೆ ಕಳೆದ 26 ತಿಂಗಳಿಂದ ಬಿಲ್ಲುಗಳನ್ನು ಪಾವತಿ ಮಾಡುತ್ತಿಲ್ಲ. ಪ್ರಸ್ತುತ ಬಿಬಿಎಂಪಿಯಲ್ಲಿ 2,000 ಕೊಟಿ ರೂ. ತೆರಿಗೆ ಹಣ ಪಾವತಿಯಾಗಿದೆ. ಆದರೂ, ಕೆಲಸ ಮಾಡಿದ ಗುತ್ತಿಗೆದಾರರಿಗೆ ಮಾತ್ರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು. ಮುಂದೆ ಗುತ್ತಿಗೆದಾರರು ಹಣಕಾಸು ಮುಗ್ಗಟ್ಟಿನಿಂದ ಅನಾಹುತ ಸಂಭವಿಸಿದ್ದಲ್ಲಿ ಇದರ ಜವಾಬ್ದಾರಿಯನ್ನು ಮುಖ್ಯ ಆಯುಕ್ತರು ಹೊಣೆ ಹೊರಬೇಕಾಗುತ್ತದೆ ಎಂದರು.