ಗ್ಯಾರೆಂಟಿ ಯೋಜನೆಗಳಿಗೆ ಎಸ್ಸಿಪಿ, ಟಿಎಸ್‌ಪಿ ಹಣ ವಾಪಸ್ ಪಡೆಯದಿದ್ದರೆ, ರಾಜ್ಯಾದ್ಯಂತ ಹೋರಾಟ

Advertisement

ಬೆಂಗಳೂರು: ರಾಜ್ಯ ಸರ್ಕಾರ ಎಸ್ಸಿಪಿ ಟಿಎಸ್ ಪಿ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ನೀಡಿರುವುದನ್ಮು ವಾಪಸ್ ಪಡೆಯದಿದ್ದರೆ, ಎಸ್ಸಿ ಎಸ್ಟಿ ಸಮುದಾಯದ ಪರವಾಗಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
ರಾಜ್ಯ ಸರ್ಕಾರ ಎಸ್ಸಿಪಿ ಟಿಎಸ್ ಪಿ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ವರ್ಗಾಯಿಸಿರುವುದನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇವತ್ತು ನಮಗೆ ನಿರಾಸೆಯ, ಆಕ್ರೋಶದ ದಿನ ಪ್ರಜಾಪ್ರಭುತ್ವದಲ್ಲಿ ಜನರಿಗೆ ಆಶ್ವಾಸನೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಈಗ ದಲಿತರ ಜೀವನದ ಜೊತೆ ಆಟ ಆಡುತ್ತಿದೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಇಬ್ಬರೂ ದಲಿತರ ಕೇರಿಗಳಿಗೆ ಹೋಗಿ ಗ್ಯಾರೆಂಟಿ ಕಾರ್ಡ್ ನೀಡಿ ಬಂದಿರಿ, ಆಗ ದಲಿತರಿಗೆ ನಿಮ್ಮ ಎಸ್ಸಿಪಿ ಟಿಎಸ್ಪಿ ಹಣ ಬಳಕೆ ಮಾಡುತ್ತೇವೆ ಅಂತ ಹೇಳಬೇಕಿತ್ತು. ಆದರೆ, ಆಗ ಹೇಳದೇ ಈಗ ಹಣ ಹೊಂದಿಸಲು ದಲಿತರ ಹಣ ಬಳಕೆ ಮಾಡುತ್ತಿದ್ದೀರಿ ಇದು ದಲಿತರಿಗೆ ಮಾಡುವ ದ್ರೋಹವಾಗಿದೆ ಎಂದರು.
ಗ್ಯಾರೆಂಟಿಗಳ ಹೆಸರಲ್ಲಿ ರಾಜ್ಯವನ್ನು ದಿವಾಳಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ. ನಾನು ಬಜೆಟ್ ಸಂದರ್ಭದಲ್ಲಿಯೇ‌ ಹೇಳಿದ್ದೇ, ನೀವು 34 ಸಾವಿರ ಕೊಟಿ ಕೊಡುವುದಾಗಿ ಹೇಳಿದ್ದೀರಿ, ಆದರೆ ಸುಮಾರು 23 ಸಾವಿರ ಕೋಟಿ ಮಾತ್ರ ಎಸ್ಸಿಪಿ ಟಿಎಸ್ ಪಿಗೆ ನೀಡುತ್ತಿದ್ದೀರಿ. ಶಕ್ತಿ ಯೋಜನೆಗೆ ಎಸ್ಸಿಪಿ ಟಿಎಸ್ ಪಿಯ ಸುಮಾರು 700 ಕೋಟಿ ಮೀಸಲಿಟ್ಟಿದ್ದೀರಿ. ಶಕ್ತಿ ಯೋಜನೆಯಡಿ ಎಸ್ಸಿ ಎಸ್ಟಿ ಯಾರು ಎಂದು ಹೇಗೆ ಗುರುತಿಸುತ್ತೀರಿ. ಗೃಹ ಲಕ್ಷ್ಮೀ ಯೋಜನೆ ಅಡಿ ಗೃಹಿಣಿಯರಿಗೆ ಸುಮಾರು 5500 ಕೋಟಿ ರೂ. ಎಸ್ದಿಪಿ ಟಿಎಸ್ ಪಿ ಹಣ ನೀಡಿದ್ದೀರಿ, ಅವರಲ್ಲಿ ಯಾರು ಎಸ್ಸಿ ಎಸ್ಟಿ ಅಂತ ಹುಡುಕುತ್ತಿರಾ ? ಎಸ್ಸಿಪಿ ಟಿಎಸ್ ಪಿ ಯಿಂದ ವರ್ಗಾವಣೆ ಮಾಡಿರುವ ಸುಮಾರು 11 ಸಾವಿರ ಕೋಟಿ ರೂ ಎಲ್ಲವೂ ಎಸ್ಸಿ ಎಸ್ಟಿ ಸಮುದಾಯಕ್ಕೆ ಬಳಕೆ ಆಗುವುದಿಲ್ಲ. ಈ ಹಣ ಇದ್ದಿದ್ದರೆ ದಲಿತರಿಗೆ ಸಾವಿರಾರು ಗಂಗಾ ಕಲ್ಯಾಣ ಬೋರ್ ವೆಲ್ ಕೊರೆಸಬಹುದಿತ್ತು. ಎಸ್ಸಿಎಸ್ಟಿ ಹಾಸ್ಟೇಲ್ ನಿರ್ಮಾಣ ಮಾಡಬಹುದಿತ್ತು. ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸಬಹುದಿತ್ತು. ನೀವು ಅದನ್ನು ತಪ್ಪಿಸಿ ಎಸ್ಸಿ ಎಸ್ಟಿ ಜನರಿಗೆ ಅನ್ಯಾಯ ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.


7 ಡಿ ತೆಗೆದು ಹಾಕಿ
ಎಸ್ಸಿಪಿ ಟಿಎಸ್ಪಿ ಕಾಯ್ದೆಯಲ್ಲಿ ನೀವು 7 ಡಿ ಕಲಂ ತಂದಿದ್ದು, ದಲಿತರಿಗೆ ಮಿಸಲಿಟ್ಟ ಹಣ ಬೇರೆ ಕಾರ್ಯಗಳಿಗೆ ಬಳಕೆ ಮಾಡಲು ನೀವೆ ಅವಕಾಶ ಕಲ್ಪಿಸಿದ್ದೀರಿ, ನೀವು ದಲಿತರ ಪರ ಭಾಷಣ ಮಾಡುತ್ತೀರಿ. ನಾವು ಸಮಾಜ ಕಲ್ಯಾಣ ಇಲಾಖೆಗೆ 100 ಅಂಬೇಡ್ಕರ್ ಹಾಸ್ಟೇಲ್, 50 ಕನಕದಾಸ ಹಾಸ್ಟೇಲ್, ಐದು ಮೆಗಾ ಹಾಸ್ಟೇಲ್ ಗಳನ್ನು ದಲಿತ ವಿದ್ಯಾರ್ಥಿಗಳಿಗೆ ಮಾಡಿದ್ದೇವು. ಅವುಗಳನ್ನು ಗಾಳಿಗೆ ತೂರಿದ್ದೀರಿ. ಬಾಬು ಜಗಜೀವನ್ ರಾಮ್ ಯೊಜನೆ ಅಡಿ ದಲಿತ ಯುವಕರಿಗೆ ಉದ್ಯೊಗ ಕಲ್ಪಿಸುವ ಯೋಜನೆ ಕಲ್ಪಿಸಿದ್ದೇವು.
ನಾವು ದಲಿತರಿಗೆ 75 ಯುನಿಟ್ ಉಚಿತ ವಿದ್ಯುತ್ ನೀಡಿದ್ದೇವು. ನೀವು ಅದನ್ನು 47 ಯುನಿಟ್ ಗೆ ಇಳಿಸಿದ್ದೀರಿ. ನೀವು ದಲಿತರ ಪರವಾಗಿದ್ದರೆ 7 ಡಿ ಕಾಯ್ದೆ ಯನ್ನು ಮೊದಲ ಅಧಿವೇಶನದಲ್ಲಿ ರದ್ದುಗೊಳಿಸಬಹುದಿತ್ತು. ಅದರ ಬದಲು ಮತಾಂತರ, ಗೋಹತ್ಯೆ ನಿಷೇಧ ವಾಪಸ್ ಪಡೆಯಲು ಮುಂದಾಗಿದ್ದೀರಿ ಎಂದು ಆರೋಪಿಸಿದರು.
ಸಮಾಜ ಕಲ್ಯಾಣ ಸಚಿವ ಎಚ್. ಸಿ. ಮಹಾದೆವಪ್ಪ. ಅವರು ದಲಿತ ಸಮುದಾಯದಿಂದ ಬಂದವರು, ಆ ಸಮುದಾಯದ ಆಶೀರ್ವಾದದಿಂದ ಮಂತ್ರಿ ಆದವರು, ಇದನ್ನು ತಡೆಯಲು ಅವರಿಗೆ ಬೆನ್ನು ಮೂಳೆ ಇಲ್ಲವೇ ? ಹಣ ವರ್ಗಾವಣೆಗೆ ಒಲ್ಲದ ಮನಸಿನಿಂದ ಒಪ್ಪಿರುವುದಾಗಿ ಹೇಳಿದ್ದೀರಿ. ನಿಮಗೆ ಅಂತಹ ಅನಿವಾರ್ಯತೆ ಏನಿದೆ ? ನೀವು ದಲಿತರಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದರು.
ಎಲ್ಲ ಗ್ಯಾರೆಂಟಿ ಯೋಜನೆಗಳಿಗೆ ದೊಖಾ ನಡೆಯುತ್ತಿದೆ. ಗೃಹ ಜ್ಯೋತಿಯಲ್ಲಿ ಒಂದು ಯುನಿಟ್ ಹೆಚ್ಚಾದರೆ ಬಿಲ್ ಕಟ್ಟಬೇಕು. ಅನ್ನಭಾಗ್ಯದಲ್ಲಿ ಅಕ್ಕಿಯನ್ನೇ ಕೊಡಲಿಲ್ಲ. ಗೃಹಲಕ್ಷ್ಮಿಯಂತೂ ಏನಾಗುತ್ತಿದೆ ಗೊತ್ತಿಲ್ಲ. ಯುವನಿಧಿ ಯೋಜನೆ ಹಣವೇ ಇಲ್ಲ.
ಎಸ್ಸಿಪಿ ಟಿಎಸ್ಪಿ ಹಣ ಎಸ್ಸಿಪಿ ಟಿಎಸ್ ಪಿ ಅವರಿಗೆ ಮೀಸಲಿಡಬೇಕು. ಗ್ಯಾರೆಂಟಿ ಯೋಜನೆಗಳಿಗೆ ಬೇರೆ ಮೂಲದಿಂದ ಹಣ ನೀಡಬೇಕು. ದಲಿತರು ಏನು ಅನ್ಯಾಯ ಮಾಡಿಧ್ದಾರೆ. ಬೇರೆ ಸಮುದಾಯಗಳಿಗೆ ಬಜೆಟ್ ನಲ್ಲಿ ನೀಡಿದಂತೆ, ಈ ಯೋಜನೆಗಳಿಗೆ ಬೇರೆ ಮೂಲದಿಂದ ಹಣ ಒದಗಿಸಬೇಕು ಎಂದು ಆಗ್ರಹಿಸಿದರು.
ನೀವು ಎಷ್ಟೇ ದೊಡ್ಡ ಮಂತ್ರಿಗಳಿದ್ದರೂ, ದಲಿತರಿಗೆ ಅನ್ಯಾಯ ಮಾಡಿದರೆ ನೀವು ಆ ಸಮುದಾಯಕ್ಕೆ ಮಾಡುವ ದ್ರೋಹವಾಗಿದೆ. ಕೂಡಲೆ ಹಣವನ್ನು ಎಸ್ಸಿಪಿ, ಟಿಎಸ್ ಪಿ ಗೆ ಕೊಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಚಳವಳಿ ರೂಪದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಕೆ. ಬೆಳ್ಳುಬ್ಬಿ ಸೇರಿದಂತೆ ಅನೇಕರು ಹಾಜರಿದ್ದರು.