ಗ್ರಾಮ ದೇವತೆ ಜಾತ್ರೆ ಯಶಸ್ವಿ: ಗ್ರಾಮಸ್ಥರಿಗೆ ಕೃತಜ್ಞತೆ

Advertisement

ಬೆಳಗಾವಿ(ಮೂಡಲಗಿ): 17ವರ್ಷಗಳ ನಂತರ ಸಡಗರ ಸಂಭ್ರಮದಿಂದ ನಡೆದಿರುವ ಹಳ್ಳೂರ ಗ್ರಾಮ ದೇವತೆ ಜಾತ್ರಾ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಮಾಡಿರುವ ಗ್ರಾಮದ ಮುಖಂಡರು ಮತ್ತು ಜಾತ್ರಾ ಕಮೀಟಿ ಪದಾಧಿಕಾರಿಗಳನ್ನು ಅಭಿನಂದಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಸಕಲರಿಗೂ ದೇವಿಯು ಒಳ್ಳೆಯದನ್ನು ಮಾಡಲಿ. ನಾಡು ಸಂಪದ್ಭರಿತವಾಗಿ ಹಚ್ಚ ಹಸಿರಿನಿಂದ ಕಂಗೊಳಿಸಲಿ ಎಂದು ಅವರು ಪ್ರಾರ್ಥಿಸಿದರು.
ತಾಲೂಕಿನ ಹಳ್ಳೂರ ಗ್ರಾಮದ ಮಹಾಲಕ್ಷ್ಮೀದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಅವರು, ಎಲ್ಲರೂ ಒಗ್ಗಟ್ಟಿನಿಂದ ದುಡಿದು ಜಾತ್ರೆಯನ್ನು ಯಶಸ್ವಿ ಮಾಡಿರುವುದಕ್ಕೆ ಬಾಲಚಂದ್ರ ಜಾರಕಿಹೊಳಿ ಅವರು ಕೃತಜ್ಞತೆ ಸಲ್ಲಿಸಿದರು.
ಕಳೆದ ಮೇ 10ರಂದು ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ಆರನೇ ಬಾರಿಗೆ ವಿಧಾನಸಭೆಗೆ ಪ್ರವೇಶಿಸಲು ಕ್ಷೇತ್ರದ ಎಲ್ಲ ಸಮುದಾಯಗಳ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಆಶೀರ್ವಾದ ಮಾಡಿದ್ದಾರೆ. ಕಾರ್ಯಕರ್ತರ ಶ್ರಮದ ಫಲವಾಗಿ ಬಿಜೆಪಿಯಲ್ಲಿಯೇ ರಾಜ್ಯದಲ್ಲಿ ಅತ್ಯಧಿಕ ಮತಗಳ ಮುನ್ನಡೆಯೊಂದಿಗೆ ಆಯ್ಕೆಯಾಗಿದ್ದೇನೆ. ಅದಕ್ಕಾಗಿ ಸಮಸ್ತ ಕಾರ್ಯಕರ್ತರಿಗೂ ಹಾಗೂ ಮತದಾರ ಬಂಧುಗಳಿಗೂ ಸದಾ ಚಿರಋಣಿಯಾಗಿರುವೆ ಎಂದರು.
ಹಳ್ಳೂರ ಗ್ರಾಮಸ್ಥರು ಒಂದಾಗಿ, ಒಗ್ಗಟ್ಟಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಹಳ್ಳೂರ ಗ್ರಾಮಸ್ಥರ ಪ್ರೀತಿ ಅಭಿಮಾನಕ್ಕೆ ನಾನೂ ಕೂಡ ಆಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಕಮೀಟಿಯಿಂದ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮಸ್ಥರು ಸತ್ಕರಿಸಿದರು.