ಚುನಾವಣೆಗಾಗಿ ಕರಸೇವಕರನ್ನು ಬಳಸಿಕೊಳ್ಳುತ್ತಿರುವ ಜೋಶಿ: ಶೆಟ್ಟರ ಆರೋಪ

Advertisement

ಹುಬ್ಬಳ್ಳಿ: ಲೋಕಸಭೆ ಚುನಾವಣೆ ಗೆಲ್ಲಲು ಮಾಸ್ಟರ್ ಪ್ಲಾನ್ ರೂಪಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕರ ಸೇವಕರನ್ನು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿ.ಪ. ಸದಸ್ಯ ಜಗದೀಶ ಶೆಟ್ಟರ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೩೦ ವರ್ಷಗಳ ಹಿಂದಿನ ಪ್ರಕರಣ ವಿಥ್ ಡ್ರಾ ಆಗಬೇಕಿತ್ತು. ಈ ಬಗ್ಗೆ ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಬಹಳ ಪ್ರಯತ್ನಿಸಿದ್ದೇನೆ. ನನ್ನ ಬಳಿಕ ಆಡಳಿತ ನಡೆಸಿದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ ಅವರು ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಈಗ ಪ್ರತಿಭಟನೆಯ ನಾಟಕವಾಡುತ್ತಿರುವ ಆರ್.ಅಶೋಕ ಗೃಹ ಸಚಿವರಾಗಿದ್ದಾಗ ಎಷ್ಟು ಪ್ರಕರಣವನ್ನು ಹಿಂಪಡೆದಿದ್ದಾರೆ ಎಂದು ಪ್ರಾಶ್ನಿಸಿದ ಶೆಟ್ಟರ, ಶ್ರೀಕಾಂತ ಜಾಮೀನು ಸಿಕ್ಕರೆ ನಾನು ಖುಷಿ ಪಡುತ್ತೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ನಿರಂತರ ೭-೮ ವರ್ಷ ಅಧಿಕಾರ ಅನುಭವಿಸಿದ ಬಿಜೆಪಿ ಸರ್ಕಾರಕ್ಕೆ ಅಂದು ಕರಸೇವಕರು ನೆನಪಾಗಲಿಲ್ಲವೇ. ಈ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಅಯೋಧ್ಯಾ ಶ್ರೀರಾಮ ಜನ್ಮ ಭೂಮಿ ಹೋರಾಟ ವಿಚಾರವನ್ನು ಜೋಶಿ ಅಸ್ತçವನ್ನಾಗಿಸಿಕೊಳ್ಳುತ್ತಿದ್ದಾರೆ. ಕೇವಲ ಇದೊಂದು ಚುನಾವಣಾ ಗಿಮಿಕ್ ಎಂದು ಆರೋಪಿಸಿದರು.
ಹಿಂದೂ, ಮುಸ್ಲಿಂ ಸಮುದಾಯಗಳ ನಡುವೆ ಒಡಕುಂಟುಮಾಡುವುದೇ ಬಿಜೆಪಿ ಉದ್ದೇಶ. ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ಹತ್ತಾರು ಕ್ರಿಮಿನಲ್ ಪ್ರಕರಣಗಳಿವೆ. ಅಂಥವರಿಗೆ ಬಿಜೆಪಿ ವಿಧಾನಸಭೆಗೆ ಟಿಕೆಟ್ ಕೊಟ್ಟಿದ್ದರು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಭಾವನಾತ್ಮಕ ವಿಚಾರಗಳಿಗೆ ಕೈ ಹಾಕಿ ಬಿಜೆಪಿ ಕೈ ಸುಟ್ಟುಕೊಂಡಿದೆ. ಕೇವಲ ಧಾರ್ಮಿಕ ವಿಚಾರಗಳ ಆಧಾರದ ಮೇಲೆ ಅಧಿಕಾರಕ್ಕೆ ಬರುಕ ಕನಸು ಕನಸಾಗಿಯೇ ಉಳಿಯಲಿದೆ ಎಂದರು.
ಅಯ್ಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನದ ವಿಚಾರವಾಗಿ ಮಾತನಾಡಿದ ಶೆಟ್ಟರ, ನನ್ನನ್ನು ಕರೀರಿ ಎಂದು ನಾನು ಎಲ್ಲೂ ಹೇಳಿಲ್ಲ ಎಂದರು.