‘ಟಕಾಟಕ್’ ಡೋಂಗಿ ಡೈಲಾಗ್ ನಂಬಿ…

Advertisement

ಬೆಂಗಳೂರು: ಚುನಾವಣಾ ಪ್ರಚಾರದ ‘ಟಕಾಟಕ್’ ಡೋಂಗಿ ಡೈಲಾಗ್ ನಂಬಿ ಬೆಂಗಳೂರಿನಲ್ಲಿ ನಿದ್ರೆಗೆಟ್ಟು ಮಹಿಳೆಯರು ಬೆಳಗಿನ ಜಾವ 4 ಗಂಟೆಗೆ ಸರತಿ ಸಾಲಿನಲ್ಲಿ ನಿಂತು ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಮುಗಿಬಿದ್ದಿರುವ ಘಟನೆ ನಿಜಕ್ಕೂ ಬೇಸರ ತರಿಸುವಂತದ್ದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಜನರ ಬಡತನವನ್ನು ಬಂಡವಾಳ ಮಾಡಿಕೊಂಡು ಬೊಗಳೆ ಬಿಡುವುದು, ಅಮಾಯಕರನ್ನು ದಿಕ್ಕು ತಪ್ಪಿಸುವುದು, ಸ್ವಾತಂತ್ರ್ಯಾ ನಂತರದಿಂದಲೂ ಕಾಂಗ್ರೆಸ್ ಅನುಸರಿಸಿಕೊಂಡು ಬಂದಿರುವ ಚಾಳಿ.
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಬಿಟ್ಟಿ ಭಾಗ್ಯಗಳನ್ನೇ ಮುಂದಿಟ್ಟುಕೊಂಡು ಇಡೀ ದೇಶದ ಮತದಾರರಿಗೆ, ಅದರಲ್ಲೂ ಮಹಿಳೆಯರಿಗೆ ಟೋಪಿ ಹಾಕಲು ಹೋಗಿ ರಾಹುಲ್‌ ಗಾಂಧಿ ಬಾಯಿಂದ ಹೊರಟ ‘ವಾರ್ಷಿಕ 1 ಲಕ್ಷ ಹಾಗೂ ತಿಂಗಳಿಗೆ 8 ಸಾವಿರ ರೂ ಕೊಡುತ್ತೇವೆಂಬ’ ಚುನಾವಣಾ ಪ್ರಚಾರದ ‘ಟಕಾಟಕ್’ ಡೋಂಗಿ ಡೈಲಾಗ್ ನಂಬಿ ಬೆಂಗಳೂರಿನಲ್ಲಿ ನಿದ್ರೆಗೆಟ್ಟು ಮಹಿಳೆಯರು ಬೆಳಗಿನ ಜಾವ 4 ಗಂಟೆಗೆ ಸರತಿ ಸಾಲಿನಲ್ಲಿ ನಿಂತು ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಮುಗಿಬಿದ್ದಿರುವ ಘಟನೆ ನಿಜಕ್ಕೂ ಬೇಸರ ತರಿಸುವಂತದ್ದು.

ತಪ್ಪು ಗ್ರಹಿಕೆಯಿಂದ ಹಸು-ಗೂಸುಗಳನ್ನು ಕೈಗೆತ್ತಿಕೊಂಡು ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಅನಗತ್ಯ ಸಂಕಷ್ಟ ಪಡುತ್ತಿರುವ ಮುಗ್ಧ ಮಹಿಳೆಯರನ್ನು ನೋಡಿಯಾದರೂ ಕಾಂಗ್ರೆಸ್ಸಿಗರ ಮನ ಕಲಕುತ್ತಿಲ್ಲವೆಂದರೆ, ಕಾಂಗ್ರೆಸ್ಸಿಗರ ಹೃದಯ ಹೀನತೆ ಹಾಗೂ ಭಂಡತನ ಎತ್ತಿ ತೋರಿಸುತ್ತದೆ. ಬಡ ಜನರೊಂದಿಗೆ ಚೆಲ್ಲಾಟವಾಡುವುದನ್ನು ಬಿಟ್ಟು ಈಗಲಾದರೂ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಅಮಾಯಕ ಮಹಿಳೆಯರಿಗೆ ವಾಸ್ತವತೆ ತಿಳಿಸಿ ಅವರ ಕ್ಷಮೆಯಾಚಿಸಲಿ, ಇಲ್ಲದಿದ್ದರೆ ತಪ್ಪು ಗ್ರಹಿಕೆಯಿಂದ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಮಹಿಳೆಯರಿಗೆ ವಾಸ್ತವ ಸಂಗತಿ ಅರಿವಾದರೆ ಉಂಟಾಗುವ ಪರಿಸ್ಥಿತಿಯ ಪರಿಣಾಮ ಕಾಂಗ್ರೆಸ್ಸಿಗರೇ ಅನುಭವಿಸಬೇಕಾಗುತ್ತದೆ ಎಂದಿದ್ದಾರೆ.