ತೇಜಸ್ವಿನಿ ಅವರಿಗೂ ಸಮಾಜ ಸೇವೆ ಮಾಡುವ ಅವಕಾಶ ಒದಗಿ ಬರಲಿ

Advertisement

ಬೆಂಗಳೂರು: ಸಹೋದರಿ ತೇಜಸ್ವಿನಿ ಅವರಿಗೂ ಮುಂದಿನ ದಿನಗಳಲ್ಲಿ ಹೆಚ್ಚಿನ ಸಮಾಜ ಸೇವೆ ಮಾಡುವ ಅವಕಾಶ ಒದಗಿ ಬರಲಿ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ. ಬೆಂಗಳೂರಿನ ಬಸವನಗುಡಿಯಲ್ಲಿ “ಅನಂತ ನಮನ” ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಟ್ವೀಟ್‌ ಮಾಡಿರುವ ಅವರು “ಅಪ್ರತಿಮ ಸಂಸದೀಯ ಪಟು, ಕೇಂದ್ರ ಸಚಿವರಾಗಿದ್ದ ದಿವಂಗತ ಶ್ರೀ ಅನಂತಕುಮಾರ್ ಅವರ ಜನ್ಮದಿನದ ಪ್ರಯುಕ್ತ ಇಂದು ಬಸವನಗುಡಿಯಲ್ಲಿ ನಡೆದ “ಅನಂತ ನಮನ”ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ. ಜನಪರ ಕಾರ್ಯಗಳನ್ನು ಮಾಡುವ ಮೂಲಕ ಅನಂತಕುಮಾರ್ ಅವರು ಸಾಕ್ಷಿಗುಡ್ಡೆಯಾಗಿ ಬಿಟ್ಟು ಅಗಲಿದ್ದಾರೆ.
ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಅವರು ಹಲವು ಸಂದರ್ಭಗಳಲ್ಲಿ ಪಕ್ಷಬೇಧ ಮರೆತು ಕರ್ನಾಟಕದ ಹಿತಕ್ಕೆ ಶ್ರಮಿಸಿದ್ದರು. ಅನಂತ್ ಕುಮಾರ್‌ ಅವರು ಸಾಗಿಬಂದ ದಾರಿಯಲ್ಲಿ ಸಹೋದರಿ, ಅನಂತ್‌ ಕುಮಾರ್ ಅವರ ಧರ್ಮಪತ್ನಿ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರು ಸಾಮಾಜಿಕ ಕಾರ್ಯಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಸಹೋದರಿ ತೇಜಸ್ವಿನಿ ಅವರಿಗೂ ಶುಭವಾಗಲಿ, ಮುಂದಿನ ದಿನಗಳಲ್ಲಿ ಹೆಚ್ಚಿನ ಸಮಾಜ ಸೇವೆ ಮಾಡುವ ಅವಕಾಶ ಒದಗಿ ಬರಲಿ ಎಂದು ಹಾರೈಸಿದೆ ಎಂದಿದ್ದಾರೆ.