ದುಗ್ಗಮ್ಮ ಜಾತ್ರೆ ರೀತಿ ಬಿಜೆಪಿ ಸಮಾವೇಶ: ಪ್ರಧಾನ್

Dharmendra Pradhan
Advertisement

ದಾವಣಗೆರೆ: ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯನ್ನು ಹೇಗೆ ಅದ್ಧೂರಿಯಾಗಿ ಇಲ್ಲಿ ಆಚರಣೆ ಮಾಡುತ್ತೀರೊ ಅದೇ ರೀತಿಯ ಜಾತ್ರೆ ಮಾ. 25ಕ್ಕೆ ಇಲ್ಲಿ ಹಮ್ಮಿಕೊಂಡಿರುವ ಬಿಜೆಪಿ ಮಹಾಸಂಗಮ ಸಮಾವೇಶ ನಡೆಯಬೇಕು. ಇದಕ್ಕೆ ದಾವಣಗೆರೆ ಜಿಲ್ಲೆಯ ಜನರು ಕಾರಣರಾಗಬೇಕು ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಕರೆ ನೀಡಿದರು.
ಮಹಾಸಂಗಮ ಸಮಾವೇಶದ ಸ್ಥಳ ವೀಕ್ಷಣೆಗೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಯ ಮೇಳ ಮಾ. 25ಕ್ಕೆ ದಾವಣಗೆರೆಯಲ್ಲಿ ಆಗಲಿದೆ. ಹೊಸ ಇತಿಹಾಸವು ನಿರ್ಮಾಣಕ್ಕೆ ಈ ನೆಲ ಸಾಕ್ಷಿಯಾಗಲಿದೆ. ಯುಗಾದಿ ಮಾರನೆಯ ದಿನ ಕನ್ನಡಿಗರು ಏನು ಆಚರಿಸುತ್ತಾರೋ ಅಂತಹ ಆಚರಣೆ ಇಲ್ಲಿ ಆಗಬೇಕು ಎಂದರು.
ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು, ಸರ್ಕಾರದ ಸೌಲಭ್ಯಗಳನ್ನು, ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುತ್ತಿರುವ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸುವ ಕೆಲಸ ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರಿಂದ ಆಗಬೇಕು ಎಂದರು.