ದೇವರ ಮುಖವಾಡ ಕದ್ದು ಪರಾರಿ

Advertisement

ಕಾರವಾರ: ತಾಲೂಕಿನ ಅಮದಳ್ಳಿ ವೀರ ಗಣಪತಿ ದೇವಸ್ಥಾನಕ್ಕೆ ನುಗ್ಗಿದ ಮೂವರು ಕಳ್ಳರು ದೇವರ ಮುಖವಾಡ ಕದ್ದು ಪರಾರಿಯಾದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಅಮದಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ೬೬ಕ್ಕೆ ಹೊಂದಿಕೊಂಡಿರುವ ವೀರ ಗಣಪತಿ ದೇವಸ್ಥಾನಕ್ಕೆ ಭಾನುವಾರ ತಡರಾತ್ರಿ ದೇವಸ್ಥಾನದ ಹಿಂಬದಿಯ ಮದುವೆ ಹಾಲ್ ಗೆಟ್ ಮುರಿದು ಒಳ ನುಗ್ಗಿದ ಮೂವರು ಮುಸುಕುಧಾರಿ ಕದೀಮರು ಬಳಿಕ ಗರ್ಭಗಡಿ ಸಮೀಪದ ಸಿಸಿ ಕ್ಯಾಮರಾದ ಸಂಪರ್ಕ ಕಟ್ ಮಾಡಿ ಗರ್ಭಗುಡಿ ಲಾಕ್ ಒಡೆದು ದೇವರಿಗೆ ಅಳವಡಿಸಿದ್ದ ೫ ಕೆಜಿ ತೂಕದ ಬೆಳ್ಳಿ ಮುಖವಾಡವನ್ನ ಹೊತ್ತೊಯ್ದಿದ್ದಾರೆ. ಆದರೆ ಇನ್ನೊಂದು ಸಿಸಿ ಕ್ಯಾಮರಾದಲ್ಲಿ ಮೂವರು ಖದೀಮರ ಕೃತ್ಯ ಸೆರೆಯಾಗಿದೆ. ೧೯೮೪ರಲ್ಲಿ ವೀರ ಗಣಪತಿ ಮಾಡಿಸಿದ್ದ ಮುಖವಾಡ ಇದಾಗಿತ್ತು. ಆದರೆ ಉಳಿದಂತೆ ದೇವರ ಕಾಣಿಕೆ ಹುಂಡಿ, ಬಾಖಿ ಎಲ್ಲ ವಸ್ತುಗಳು ಯಥಾಸ್ಥಿತಿಯಲ್ಲಿ ಇರುವುದಾಗಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಇನ್ನು ಘಟನೆ ಸಂಬಂಧ ಸ್ಥಳಕ್ಕೆ ತೆರಳಿದ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಸ್ವಾನದಳ ಪರಿಶೀಲನೆ ನಡೆಸಿದೆ. ಕಳೆದ ಕೆಲ ದಿನಗಳಿಂದ ಪ್ಲಾನ್ ಮಾಡಿ ಈ ಕೃತ್ಯ ಎಸಗಲಾಗಿದೆ. ಸೆಕ್ಯೂರಿಟ್ ಗಾರ್ಡ್ ಇದ್ದರು ಮುಂಭಾಗದಲ್ಲಿ ಮಲಗಿದ್ದ, ಆತನಿಗೂ ತಿಳಿಯದಂತೆ ಈ ಕೃತ್ಯ ಎಸಗಲಾಗಿದೆ ಎಂದು ಕಮೀಟಿಯ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.