ನನ್ನ ಹೆಣ ಕೂಡ ಬಿಜೆಪಿಗೆ ಹೋಗುವುದಿಲ್ಲ: ಕೋಮುವಾದಿಗಳ ಜೊತೆ ರಾಜಿ ಮಾಡಿಕೊಂಡವನಲ್ಲ

Advertisement

ಬೆಂಗಳೂರು: ನನ್ನ ಹೆಣ ಕೂಡ ಬಿಜೆಪಿಗೆ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಮುಖಂಡರು & ಕಾರ್ಯಕರ್ತರ ಸಮಾವೇಶದಲ್ಲಿ ಕುಮಾರಸ್ವಾಮಿ ಸ್ಫೋಟಕ ಆರೋಪ ಮಾಡಿದ್ದರು. ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಹೋಗಲು ಸಿದ್ಧರಾಗಿದ್ದರು ಎಂಬ ರೀತಿ ವಾಗ್ದಾಳಿ ನಡೆಸಿದ್ದರು. ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಜೆಡಿಎಸ್ ನಾಯಕರು ಮತ್ತು ಮಾಜಿ ಸಿಎಂ ಎಚ್‌ಡಿಕೆ ಮಾಡಿದ ಆರೋಪಕ್ಕೆ ಉತ್ತರಿಸಿದ್ದಾರೆ. ನಾನು ಬಿಜೆಪಿ ಸೇರಲು ಹೋಗಿದ್ದೆ ಅಂತಾ ಹೇಳಿದರೆ ಯಾರಾದರೂ ನಂಬಲು ಆಗುತ್ತಾ? ನಾನು ಜಾತ್ಯಾತೀತ ಮೌಲ್ಯಗಳನ್ನು ಅನುಸರಿಸಿ ರಾಜಕೀಯ ಮಾಡಿದ್ದೇನೆ. ಹೀಗಿದ್ದಾಗ ನಾನು ಬಿಜೆಪಿಗೆ ಹೋಗಲು ಸಾಧ್ಯವಾ? ಎಂದು ಎಚ್‌ಡಿಕೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿರುವ ಅವರು ಆರಂಭದಿಂದಲೂ ಕೋಮುವಾದಿಗಳ ವಿರುದ್ಧ ರಾಜಕಾರಣ ಮಾಡಿಕೊಂಡು ಬಂದವನು ನಾನು. ಅಧಿಕಾರ ಇರಲಿ, ಇಲ್ಲದಿರಲಿ ಕೋಮುವಾದಿಗಳ ಜೊತೆ ರಾಜಿ ಮಾಡಿಕೊಂಡವನಲ್ಲ. “ನನ್ನ ಹೆಣ ಕೂಡ ಬಿಜೆಪಿಗೆ ಹೋಗುವುದಿಲ್ಲ. ನಾನು ನಂಬಿರುವ ಸಿದ್ಧಾಂತಕ್ಕೆ ಇಷ್ಟು ಬದ್ಧತೆ ನನ್ನಲ್ಲಿದೆ” ಎಂದಿದ್ದಾರೆ.