ನಾನೇನೂ ರಾಜಕೀಯ ನಿವೃತ್ತಿ ಪಡೆದುಕೊಂಡಿಲ್ಲ

BSY
Advertisement

ಬೆಳಗಾವಿ: ನಾನು ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡದೆ ಇರುವ ನಿರ್ಧಾರ ಮಾಡಿದ್ದೇನೆ. ಹಾಗೆಂದು ನಾನೇನೂ ರಾಜಕೀಯ ನಿವೃತ್ತಿ ತೆಗೆದುಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ನನಗೆ ಅಧಿಕಾರ, ಸ್ಥಾನ ಮಾನ ಎಲ್ಲವನ್ನೂ ಕೊಟ್ಟಿದೆ. ಅದರ ಋಣ ತೀರಿಸಬೇಕಾಗಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಬಹುಮತದಿಂದ ಗೆಲ್ಲಿಸಿ ತರುವ ಉದ್ದೇಶದಿಂದ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಪಕ್ಷ ಸಂಘಟಿಸುತ್ತೇನೆ. ೧೫೦ರಲ್ಲಿ ೧೪೦ ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರವನ್ನು ನಮ್ಮ ಪಕ್ಷವೇ ಏರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಾನು ರಾಷ್ಟç ರಾಜಕೀಯಕ್ಕೆ ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದ ಅವರು, ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ನನಗೆ ಆಹ್ವಾನ ನೀಡಿದಾಗಲೇ ನಾನು ರಾಜ್ಯ ಬಿಟ್ಟು ಹೋಗಿರಲಿಲ್ಲ. ನನ್ನ ಮಗ ರಾಘವೇಂದ್ರ ಸಂಸದರಿದ್ದಾರೆ. ಬಿ.ವೈ ವಿಜಯೇಂದ್ರ ರಾಜ್ಯ ಉಪಾಧ್ಯಕ್ಷರಿದ್ದಾರೆ. ನನಗೀಗ ವಯಸ್ಸು ೮೦ ಆಗಿದೆ. ದೇವರು ಆರೋಗ್ಯ ಮತ್ತು ಶಕ್ತಿ ಕೊಟ್ಟರೆ ಸಾಕು. ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದರು.