ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ನಾಲ್ವರು ಸಾವು, ಮೂವರು ಗಂಭೀರ

Advertisement

ಚಿತ್ರದುರ್ಗ : ಭೀಕರ ರಸ್ತೆ ಅಪಘಾತದಲ್ಲಿ ಗಂಡ, ಹೆಂಡತಿ, ಮಗಳು ಸೇರಿದಂತೆ ನಾಲ್ಕು ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಸಮೀಪದ ಮಲ್ಲಾಪುರ ಗೊಲ್ಲರಹಟ್ಟಿ ಸಮೀಪ ಸೋಮವಾರ ಬೆಳಗ್ಗೆ ಸಂಭವಿಸಿದೆ.
ತುಮಕೂರು ಮೂಲದ ಖಲೀಲ್(42), ಹೆಂಡತಿ ಮಲ್ಲಿಕಾ(37), ಮಗಳು ತಬ್ರೇಜ್(13) ಹಾಗೂ ಕಾರು ಚಾಲಕ ಸಂಸುದ್ದೀನ್(40) ಅಪಘಾತದಲ್ಲಿ ಮೃತಪಟ್ಟಿರುವ ದುರ್ದೈವಿಗಳಾಗಿದ್ದು, ಖಲೀಲ್ ಮಲ್ಲಿಕಾ ಮಕ್ಕಳಾದ ನರ್ಗಿಶ್, ರೆಹಾನ್, ರೆಹಮಾನ್ ಇವರುಗಳು ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ತುಮಕೂರಿನಲ್ಲಿ ಖಲೀಲ್ ಹಾಗೂ ಮಲ್ಲಿಕಾ ದಂಪತಿಗಳು ತಮ್ಮ ನಾಲ್ಕು ಜನ ಮಕ್ಕಳೊಂದಿಗೆ ವಾಸವಿದ್ದು, ಕಳೆದ ಎರಡು ದಿನಗಳ ಹಿಂದೆಯಷ್ಟೇ ಬೆಳಗಾಂ ಜಿಲ್ಲೆಗೆ ತಮ್ಮ ಮನೆಯ ಕೆಲಸದ ನಿಮಿತ್ತ ತೆರಳಿದ್ದರು ಎಂದು ಹೇಳಲಾಗುತ್ತಿದ್ದು, ನಿನ್ನೆ ದಿನ ಕೆಲಸ ಮುಗಿದಿದ್ದರಿಂದ ವಾಪಸ್ಸು ತಮ್ಮ ವಾಸದ ಊರು ತಮಕೂರಿಗೆ ಬೆಳಗಾಂ ನಲ್ಲೇ ಬಾಡಿಗೆ ಕಾರನ್ನು ಬಾಡಿಗೆಗೆ ಪಡೆದು ಚಾಲಕ ಶಂಶುದ್ದಿನ್ ಅವರ ಜೊತೆ ಹೋಗುತ್ತಿರುವಾಗ ಕಾರು ಮಲ್ಲಾಪುರ ಗೊಲ್ಲರಹಟ್ಟಿ ಬಳಿ ಬೆಂಗಳೂರು ಕಡೆಗೆ ಎನ್ಎಚ್-48ರ ಅಂಚಿನಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಪರಿಣಾಮ ಖಲೀಲ್, ಮಲ್ಲಿಕಾ, ತಬ್ರೇಜ್, ಹಾಗೂ ಚಾಲಕ ಶಂಶುದ್ದಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಂತೆ ನರ್ಗಿಶ್, ರೆಹಾನ್, ರೆಹಮಾನ್ ಇವರುಗಳು ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.