ನೂತನ ಸಚಿವರಿಗೆ ಖಾತೆ ಹಂಚಿಕೆ

Advertisement

ಆಂಧ್ರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಎನ್‌ ಚಂದ್ರಬಾಬು ನಾಯ್ಡು ತಮ್ಮ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಅದರಂತೆ ಜನ ಸೇನಾ ಪಾರ್ಟಿ ಅಧ್ಯಕ್ಷ ಹಾಗೂ ನಟ ಕೊನಿಡೇಲ ಪವನ್‌ ಕಲ್ಯಾಣ್‌ ಅವರು ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದಾರೆ. ಉಪ ಮುಖ್ಯಮಂತ್ರಿ ಹುದ್ದೆಯೊಂದಿಗೆ ಪವನ್‌ ಕಲ್ಯಾಣ್‌ ಅವರು ಪಂಚಾಯತಿ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಸಹಿತ ಪರಿಸರ, ಅರಣ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಗಳನ್ನೂ ನಿರ್ವಹಿಸಲಿದ್ದಾರೆ.
ಪ್ರಮುಖ ಖಾತೆಯಾದ ಹಣಕಾಸು ಖಾತೆಯನ್ನು ಹಿರಿಯ ನಾಯಕ ಪಯ್ಯಾವುಲ ಕೇಶವ್ ಅವರಿಗೆ ನೀಡಲಾಗಿದ್ದು, ಬಿಜೆಪಿಯ ವೈ ಸತ್ಯ ಕುಮಾರ್ ಅವರಿಗೆ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಖಾತೆಯನ್ನು ನೀಡಲಾಗಿದೆ. ಮೊದಲ ಬಾರಿಗೆ ಶಾಸಕ ಟಿ.ಜಿ.ಭರತ್ ಅವರಿಗೆ ಕೈಗಾರಿಕೆ ಮತ್ತು ವಾಣಿಜ್ಯ ಖಾತೆ ಮತ್ತು ಹಿರಿಯ ನಾಯಕ ಆನಂ ರಾಮನಾರಾಯಣ ರೆಡ್ಡಿ ಅವರಿಗೆ ದತ್ತಿ ಸಚಿವಾಲಯದ ಉಸ್ತುವಾರಿ ವಹಿಸಲಾಗಿದೆ.