ಪರಹಿತ ಸನ್ಮತಿಯೇ ʼವಿವೇಕʼ

Advertisement

ವಿವೇಕಾನಂದರು ರಾಮಕೃಷ್ಣ ಪರಮಹಂಸರು ಶಿವಾಧಿನರಾದ ನಂತರ ಅವರ ಧರ್ಮಪತ್ನಿಯಾದ ಶಾರದಾಮಾತೆಯಲ್ಲಿಯೇ ಅವರನ್ನು ಕಾಣುತ್ತಿದ್ದರು. ಅಮೆರಿಕದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ವಿದೇಶಕ್ಕೆ ಹೋಗುವ ಮುನ್ನ ಶಾರದಾಮಾತೆಯ ಸಮ್ಮತಿ ಕೇಳಲು ಬರುತ್ತಾರೆ. ಆಗ “ಇನ್ನೂ ಸಮಯ ಬಂದಿಲ್ಲ ಬೇಡ” ಎಂದು ಮಾತೆಯು ನಿರಾಕರಿಸುತ್ತಾರೆ. ಸ್ನೇಹಿತರ ಆಗ್ರಹ ಹೆಚ್ಚಾದಾಗ ಎರಡನೇ ಬಾರಿ ಕೇಳಲು ಬರುತ್ತಾರೆ. ಆಗಲೂ ಮಾತೆಯು ‘ಇನ್ನೂ ಸಮಯ ಬಂದಿಲ್ಲ, ಬೇಡ” ಎಂದು ಹೇಳುತ್ತಾರೆ. ಕೆಲವು ದಿನಗಳ ನಂತರ ಮತ್ತೆ ಸ್ನೇಹಿತರು ಇನ್ನೊಮ್ಮೆ ಪ್ರಯತ್ನಿಸಿ ನೋಡು ಎಂದು ಆಗ್ರಹಿಸಿದರು. ಕೊನೆಯ ಬಾರಿ ಕೇಳಿದರಾಯಿತು ಎಂದು ಮಾತೆಯ ಹತ್ತಿರ ಬರುತ್ತಾರೆ.
ಆಗ ಶಾರದಾಮಾತೆಯು ಅಡುಗೆಮನೆಯಲ್ಲಿ ಆಹಾರವನ್ನು ಸಿದ್ಧಗೊಳಿಸುತ್ತಿರುತ್ತಾರೆ. ನಮ್ರತೆಯಿಂದ ತಲೆ ಬಾಗಿ “ಸ್ನೇಹಿತರು ನಿಮ್ಮ ಒಪ್ಪಿಗೆ ಕೇಳಲು ಮತ್ತೊಮ್ಮೆ ಕಳಿಸಿದ್ದಾರೆ” ಎಂದು ಹೇಳುತ್ತಾರೆ. ಆ ಸಮಯದಲ್ಲಿ ಮಾತೆಯ ಕೈಯ್ಯಲ್ಲಿಯ ಚಾಕು ಕೆಳಗೆ ಬೀಳುತ್ತದೆ. ಆಗ ಮಾತೆಯು “ವಿವೇಕ! ಮೊದಲು ಕೆಳಗೆ ಬಿದ್ದ ಚಾಕು ಕೊಡು”. ಎಂದು ಹೇಳಿದಾಗ “ಆಗಲಿ ಮಾತೆ” ಎಂದು ಚಾಕು ಎತ್ತಿ ಮಾತೆಗೆ ಕೊಡುತ್ತಾನೆ. ತಕ್ಷಣವೇ ” ವಿವೇಕ! ಸಮಯ ಬಂದಾಗಿದೆ. ನೀನು ವಿದೇಶಕ್ಕೆ ಹೋಗು. ಕೀರ್ತಿಶಾಲಿಯಾಗಿ ಬಾ” ಎಂದು ಆದೇಶಿಸಿದರು. ಆಗ ವಿವೇಕಾನಂದರು “ನಾನು ಚಾಕು ಕೊಡುವುದಕ್ಕೂ, ಸಮಯ ಬರುವುದಕ್ಕೂ ಏನು ಸಂಬಂಧ? ಚಾಕು ಕೊಟ್ಟ ತಕ್ಷಣವೇ ಹೋಗಲು ಅಪ್ಪಣೆ ನೀಡಿದಿರಿ. ಅದಕ್ಕೆ ಕಾರಣವೇನು? ಎಂದು ಕೇಳಿದ. ಆಗ ಮಾತೆಯು ಮುಗುಳ್ನಗುತ್ತ “ನೀನು ಚಾಕು ಕೊಡುವಾಗ ಅದರ ಹಿಡಕೆಯನ್ನು ನನ್ನ ಕಡೆ ಮಾಡಿ, ಮುಂಭಾಗವನ್ನು ನೀನು ನಿನ್ನ ಕೈಯಲ್ಲಿ ಹಿಡಿದು ಕೊಟ್ಟೆ. ಇದರಿಂದ ಈ ಚಾಕು ಪ್ರಸಂಗವಶಾತ್ ಚುಚ್ಚಿದರೆ ನನಗೆ ಚುಚ್ಚಲಿ, ನಾನು ಯಾರಿಗೆ ಚಾಕು ಕೊಡುತ್ತಿರುವೆನೋ ಅವರಿಗೆ ಏನೂ ಆಗಬಾರದು ಎಂಬ ಪರಹಿತ ಸನ್ಮತಿ ನಿನ್ನಲ್ಲಿರುವುದರಿಂದ ನೀನು ಖಂಡಿತವಾಗಲೂ ಉನ್ನತಿಯನ್ನು ಪಡೆದುಕೊಳ್ಳುತ್ತಿಯಾ. ಎಂದು ಹೇಳಿದರಂತೆ. ಹೀಗೆ ಇನ್ನೊಬ್ಬರಿಗೆ ಹಿತ ಬಯಸುವ ನಮ್ಮ ಸನ್ಮತಿಯೇ ನಮ್ಮ ಉನ್ನತಿಗೆ ಕಾರಣವಾಗುವುದರಿಂದ ತಮ್ಮ ಸರ್ವಾಂಗೀಣ ಉನ್ನತಿ ಬಯಸವುವವರು ಸದಾ ಇತರರ ಹಿತವನ್ನು ಬಯಸಬೇಕು.