ಪಾಕಿಸ್ತಾನ್ ಜಿಂದಾಬಾದ್ ಘೋಷಣೆ: ಕ್ರಮ ಜರುಗಿಸದಿದ್ದರೆ ಹೋರಾಟ

ಪ್ರಲ್ಹಾದ್ ಜೋಶಿ
Advertisement

ಹುಬ್ಬಳ್ಳಿ: ರಾಜ್ಯ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಗೆದ್ದ ಬಳಿಕ ಅವರ ಬೆಂಬಲಿಗರು ಸಂಭ್ರಮಾಚರಣೆ ವೇಳೆ ವಿಧಾ‌ನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಹಾಕಿದ್ದನ್ನು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಖಂಡಿಸಿದ್ದಾರೆ.
ವಿಧಾನ ಸೌಧ ಕರ್ನಾಟಕ ಜನತೆಯ ಶಕ್ತಿ ಕೇಂದ್ರ. ಅಲ್ಲಿಯೇ ಪಾಕಿಸ್ತಾನ್ ಜಿಂದಾಬಾದ ಘೋಷಣೆ ಮಾಡಿರುವುದು ಖಂಡನೀಯ. ನಾಸಿರ್ ಹುಸೇನ್ ಅವರೇ ಇದಕ್ಕೆ ಕಾರಣ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಶಿಷ್ಯರಾಗಿದ್ದು, ಖರ್ಗೆ ಮತ್ತು ರಾಹುಲ್ ಗಾಂಧಿ ಕೂಡಲೇ ಕ್ರಮ ಜರುಗಿಸಬೇಕು. ರಾಜ್ಯ ಗೃಹ ಸಚಿವರು ತಕ್ಷಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಇಲದೇ ಇದ್ದರೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಯಾವಾಗ ಯಾವಾಗ ಅಧಿಕಾರದಲ್ಲಿ ಇರುತ್ತದೋ ಆವಾಗ ಪಾಕಿಸ್ತಾನ ಬೆಂಬಲಿತ ಮನಸ್ಸುಗಳಿಗೆ ಪರೋಕ್ಷವಾಗಿ ಬೆಂಬಲಿಸಿಕೊಂಡೇ ಬಂದಿದೆ. ಈಗ ಅದೂ ಅತಿರೇಕಕ್ಕೆ ಹೋಗಿ ನೇರವಾಗಿಯೇ ಪಾಕಿಸ್ತಾನ ಪರ ಘೋಷಣೆ ಕೂಗಲು ಕಾರಣವಾಗಿದೆ ಎಂದು ಸಚಿವ ಜೋಶಿ ಆರೋಪಿಸಿದರು.