ಪೂರ್ಣ ಬಹುಮತದ ಬಿಜೆಪಿ ಸರಕಾರಕ್ಕೆ ಮತ್ತೆ ಅಧಿಕಾರ

Advertisement

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಮತ್ತು ಬಿ.ಎಸ್‌.ಯಡಿಯೂರಪ್ಪ- ಬಸವರಾಜ ಬೊಮ್ಮಾಯಿ ನೇತೃತ್ವಗಳ ಸರಕಾರಗಳು ಅನುಷ್ಠಾನ ಮಾಡಿದ ಅಭಿವೃದ್ಧಿ ಯೋಜನೆಗಳು, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಮತ್ತು ನಿರ್ಮಾಣ ಮಾಡಿದ ಮೂಲಭೂತ ಸೌಕರ್ಯಗಳ ಬಗ್ಗೆ ರಾಜ್ಯದ ಜನತೆಗೆ ಸಂಪೂರ್ಣ ಮೆಚ್ಚುಗೆಯಿದ್ದು, ಭಾರತೀಯ ಜನತಾ ಪಕ್ಷದ ಪೂರ್ಣ ಬಹುಮತದ ಸರಕಾರ ಈ ಬಾರಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ರಾಜ್ಯದಲ್ಲಿ ಚುನಾವಣೆಯ ಕಾವು ಏರುತ್ತಿದ್ದು, ಇಂದು ಬಹಿರಂಗ ಪ್ರಚಾರದ ಕೊನೆಯ ದಿನವಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ದರ್ಶನ ಮಾಡಿದ್ದೇನೆ. ಒಂದು ವರ್ಷದಿಂದ ಬಿಜೆಪಿಯ ಚುನಾವಣೆ ತಯಾರಿ ನಡೆದಿತ್ತು. ಪೇಜ್ ಪ್ರಮುಖರ ಸಮಾವೇಶದಿಂದ ತೊಡಗಿ, ಸಂಕಲ್ಪ ಯಾತ್ರೆ, ಬೂತ್ ವಿಜಯ ಯಾತ್ರೆ, ವಿಜಯ ಸಂಕಲ್ಪ ಯಾತ್ರೆ ಮಡಿದ್ದೇವೆ. ಪ್ರಧಾನಿ ಮೋದಿ ಅವರು ಚುನಾವಣೆ ಘೋಷಣೆಗೆ ಮೊದಲು 16 ಬಾರಿ, ಚುನಾವಣೆ ಘೋಷಣೆ ಆದ ನಂತರ 20 ಬಾರಿ ರಾಜ್ಯ ಪ್ರವಾಸ ಮಾಡಿದ್ದಾರೆ. ಇವೆಲ್ಲದರ ಪರಿಣಾಮವಾಗಿ ರಾಜ್ಯದಲ್ಲಿ ಬಿಜೆಪಿಯ ಬಹುಮತದ ಸರಕಾರ ನಿರ್ಮಾಣ ಆಗುತ್ತದೆ ಎಂದು ನಳಿನ್ ಭರವಸೆ ವ್ಯಕ್ತಪಡಿಸಿದರು.
ಚುನಾವಣೆ ಪ್ರಚಾರದ ವೇಳೆ ಹೋದ ಕಡೆಗಳೆಲ್ಲಾ ಬಿಜೆಪಿಗೆ ಅಭೂತಪೂರ್ವ ಜನಬೆಂಬಲ ಸಿಗುತ್ತಿದೆ. ಡಬಲ್ ಎಂಜಿನ್ ಸರಕಾರದ ಸಾಧನೆಗಳು ಇವತ್ತು ಜನಸಾಮಾನ್ಯರಿಗೆ ತಲುಪಿವೆ. ಪ್ರಧಾನಿ ಮೋದಿ ಅವರ ಆಡಳಿತದ ಶೈಲಿ, ಅಭಿವೃದ್ಧಿ ಕಾರ್ಯಗಳು, ನಮ್ಮ ಮುಖ್ಯಮಂತ್ರಿಗಳ ಕಾರ್ಯಗಳು, ಡಬಲ್ ಎಂಜಿನ್ ರಕಾರ ಅನುಷ್ಠಾನ ಮಾಡಿದ ಸಮಾಜ ಕಲ್ಯಾಣ ಯೋಜನೆಗಳು ಪ್ರತಿ ಮನೆಮನೆಗೆ ತಲುಪಿವೆ. ಅಭೂತಪೂರ್ವ ಅಭಿವೃದ್ಧಿ ಕಾರ್ಯ, ಮೂಲಸೌಕರ್ಯ ನಿರ್ಮಾಣದ ಲಾಭಗಳು ಜನಮಾನಸಕ್ಕೆ ತಲುಪಿವೆ ಎಂದು ಅವರು ನುಡಿದರು.
ಕಳೆದ ಚುನಾವಣೆಯ ವರೆಗೂ ಹಳೆ ಮೈಸೂರು ಭಾಗ ಜೆಡಿಎಸ್ ಭದ್ರಕೋಟೆ ಆಗಿತ್ತು. ಆದರೆ ಈ ಬಾರಿ ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಅವರ ಪ್ರವಾಸದ ನಂತರ ಆ ಭಾಗದಲ್ಲೂ ನಿರೀಕ್ಷೆಗೆ ಮೀರಿ ಜನಬೆಂಬಲ ಬಿಜೆಪಿಗೆ ಸಿಗುತ್ತಿದೆ. ಕರ್ನಾಟಕದ ಉದ್ದಗಲಕ್ಕೂ ಜನರ ಸಕಾರಾತ್ಮಕ ಬೆಂಬಲ ಸ್ಪಷ್ಟವಾಗಿ ಕಾಣುತ್ತಿದೆ. ಹೀಗಾಗಿ ಪೂರ್ಣ ಬಹುಮತದ ಸರಕಾರ ಬರುತ್ತದೆ. ಹಿಂದಿನ ಯಾವ ಪ್ರಧಾನಿಯೂ ಮಾಡಿರದಷ್ಟು ರೋಡ್‌ ಶೋಗಳನ್ನು, ಸಾರ್ವಜನಿಕ ಸಭೆಗಳನ್ನು ಪ್ರಧಾನಿ ಮೋದಿಯವರು ಮಾಡಿದ್ದಾರೆ. ಫಲಾನುಭವಿಗಳ ಜತೆ ಸಂವಾದ ಮಾಡಿದಾಗ ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆತಿದೆ. ಪ್ರತಿ ಮತಗಟ್ಟೆಯಲ್ಲಿ 15-20 ಫಲಾನುಭವಿಗಳಿದ್ದಾರೆ. ಅವರೆಲ್ಲರೂ ಮೋದಿ ಸರಕಾರ, ಬೊಮ್ಮಾಯಿ ಸರಕಾರದ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ನಳಿನ್ ಹೇಳಿದರು.
ಅಂಬೇಡ್ಕಕರ್ ಕಂಡ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕೊಟ್ಟಿರುವ ಮೀಸಲಾತಿ ಒದಗಿಸಿಕೊಟ್ಟಿದ್ದು ಬಿಜೆಪಿ ಸರಕಾರ. ವೀರಶೈವ, ಒಕ್ಕಲಿಗರಿಗೆ ನೀಡಿದ ಮೀಸಲಾತಿ, ಸದಾಶಿವ ಆಯೋಗದ ವರದಿ ಅನುಸಾರ ನೀಡಿರುವ ಒಳ ಮೀಸಲಾತಿ ಪರಿಹಾರಗಳು, ಬೆಟ್ಟಕುರುಬ, ಕಾಡುಕುರುಬ ಸಮುದಾಯಕ್ಕೆ ಕೊಟ್ಟಿರುವ ಮೀಸಲಾತಿ- ಹೀಗೆ ಸಾಮಾಜಿಕ ನ್ಯಾಯಕ್ಕಾಗಿ ಕೈಗೊಂಡ ಕ್ರಮಗಳು ಅನೇಕ. ಮೂಲಭೂತ ಸೌಕರ್ಯ, ಜನ ಕಲ್ಯಾಣದ ಯೋಜನೆ, ಸಾಮಾಜಿಕ ನ್ಯಾಯ- ಈ ಮೂರನ್ನೂ ಕೊಟ್ಟಿದ್ದರಿಂದ ಬಿಜೆಪಿ ಬಗ್ಗೆ ಜನರಿಗೆ ಭರವಸೆ ಮೂಡಿದೆ.
224 ಕ್ಷೇತ್ರಗಳಲ್ಲಿ ಎಲ್ಲ ಸಮುದಾಯಗಳನ್ನು ಗುರುತಿಸಿ ಗೌರವಿಸಿದ್ದೇವೆ. ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ 34 ಒಬಿಸಿ, 37 ಪರಿಶಿಷ್ಟ ಜಾತಿ, 18 ಪರಿಶಿಷ್ಟ ಪಂಗಡ, 134 ಸಾಮಾನ್ಯ ವರ್ಗದವರಿಗೆ ಟಿಕೆಟ್ ನಿಡಿದ್ದೇವೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ, ಸಾಮಾನ್ಯ ಕಾರ್ಯಕರ್ತರನ್ನೂ ಗುರುತಿಸಿದ್ದೇವೆ. ಆದಿದ್ರಾವಿಡ ಸಮುದದಾಯದ ಭಾಗೀರಥಿ ಮುರುಳ್ಯ, ಸಾಮಾನ್ಯ ಕಾರ್ಯಕರ್ತ ಗುರುರಾಜ್ ಗಂಟಿಹೊಳೆ ಅಂಥವರಿಗೆ ಟಿಕೆಟ್ ನೀಡಿದ್ದೇವೆ. 4 ಜನ ಜಿಲ್ಲಾಧ್ಯಕ್ಷರು, ಬೀದರ್ ಕಾರ್ಯಕರ್ತರನ್ನು ಐಎಎಸ್, ಐಪಿಎಸ್‌, ಅಧಿಕಾರಿಗಳು, ವೈದ್ಯರುಗಳನ್ನು ಅಭ್ಯರ್ಥಿಗಳಾಗಿ ನಿಲ್ಲಿಸಿದ್ದೇವೆ ಎಂದು ನಳಿನ್ ವಿವರ ನೀಡಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ, ಕೇಂದ್ರ ನಾಯಕ ಅಮಿತ್ ಶಾ, ಬೇರೆ ಬೇರೆ ಮುಖ್ಯಮಂತ್ರಿಗಳು, ಸಚಿವರು, ಕೇಂದ್ರ ಸಚಿವರು ರಾಜ್ಯದಲ್ಲಿ ಬಿಜೆಪಿ ಪರ ವ್ಯಾಪಕ ಪ್ರಚಾರ ಮಾಡಿದ್ದಾರೆ. ಇವೆಲ್ಲವೂ ಪಕ್ಷಕ್ಕೆ ಬಹಳಷ್ಟು ಬಲ ಕೊಟ್ಟಿದೆ. ಪ್ರಧಾನಿ ಪ್ರವಾಸ, ಅವರ ಯೋಜನೆ, ರೋಡ್ ಶೋ ಬಗ್ಗೆ ಚರ್ಚೆ ನಡೆಯುತ್ತಿದೆ. ಇವೆಲ್ಲವೂ ಜನರ ಮನಸ್ಸಿನಲ್ಲಿದೆ. ನಾಲ್ಕು ವರ್ಷದ ಸರಕಾರ ನಮ್ಮದು. ಈ ಅವಧಿಯಲ್ಲಿ ನಮ್ಮ ಅಭಿವೃದ್ಧಿ ಕಾರ್ಯಗಳು ಜನರಿಗೆ ಒಪ್ಪಿಗೆಯಾಗಿದೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ,- ಹೀಗೆ ಎಲ್ಲ ಭಾಗಗಳಲ್ಲೂ ಬಿಜೆಪಿ ಇಂದು ಮುಮಚೂಣಿಯಲ್ಲಿದೆ ಎಂದು ನಳಿನ್ ಹೇಳಿದರು.
ಕೋವಿಡ್, ಬರ, ನೆರೆ ಮಧ್ಯೆಯೂ ಕರ್ನಾಟಕವನ್ನು ಆರ್ಥಿಕತೆಯಲ್ಲಿ ಸುಸ್ಥಿರವಾಗಿ ಮುನ್ನಡೆಸಿದ್ದು ಬಿಜೆಪಿ ಸರಕಾರದ ಸಾಧನೆ ಎಂದು ಅವರು ನುಡಿದರು. ದ.ಕ ಜಿಲ್ಲೆಯಲ್ಲಿ ಎಂಟಕ್ಕೆ ಎಂಟೂ ಸ್ಥಾನಗಳನ್ನು ಗೆಲ್ಲುತ್ತೇವೆ. ಎಲ್ಲ ಸಮೀಕ್ಷೆಗಳಲ್ಲೂ ಕರಾವಳಿ ಮುಂದಿದೆ. ರಾಜ್ಯದಲ್ಲಿ ಬಹುಮತದ ಸರಕಾರ ಮಾಡುತ್ತೇವೆ ಎಂದು ನಳಿನ್ ಪ್ರತಿಪಾದಿಸಿದರು.