ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ

Advertisement

ಧಾರವಾಡ: ರಾಜಕೀಯ ವ್ಯವಸ್ಥೆ ಹಾಳಾಗಿದೆ. ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಆರೋಪಿಸಿದರು.
ಕಿತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ ಬಂದಾಗ ಮಾತ್ರ ಆದಾಯ ತೆರಿಗೆ ಇಲಾಖೆ ದಾಳಿ ಆಗುತ್ತವೆ. ಕಳೆದ ಚುನಾವಣೆಯಲ್ಲಿ ನನ್ನ ಆಪ್ತ ಸಹಾಯಕರನ್ನು ನಾಲ್ಕು, ಐದು ದಿನ ವಿಚಾರಣೆಗೆಂದು ಕರೆದುಕೊಂಡು ಕೂಡಿಸಿದರು. ಈ ರೀತಿಯ ರಾಜಕಾರಣ ಸಲ್ಲದು ಎಂದು ಬೇಸರ ವ್ಯಕ್ತಪಡಿಸಿದರು.
ಯಾವುದೋ ಪಾರ್ಟಿ ಇರಲಿ ಆಯ್ಕೆಯಾಗಿ ಬಂದ ತಕ್ಷಣ ಜನಪರ ಕೆಲಸ ಮಾಡಬೇಕು. ಆದರೆ, ಕಾಂಗ್ರೆಸ್ಸಿಗರು ಎನ್ನುವುದಕ್ಕಾಗಿ ಅವರಿಗೆ ಸೌಲಭ್ಯ ನೀಡದೇ ಇರುವುದು ನೋವಿನ ಸಂಗತಿ. ಎಲ್ಲರೂ ಒಂದೇ ಎಂದು ನಡೆಯಬೇಕು ಎಂದರು.
ಸತ್ಯದ ಮೇಲೆ, ನ್ಯಾಯಾಲಯದ ಮೇಲೆ ಭರವಸೆ ಇದೆ. ಅದು ಏನು ತೀರ್ಪು ನೀಡುತ್ತದೆ ಅದಕ್ಕೆ ತಲ ಬಾಗುತ್ತೇನೆ. ನಾನು ಇಲ್ಲದಿದ್ದರೂ ನನ್ನ ಪತ್ನಿಗೆ ಗೌರವ ನೀಡುತ್ತಿದ್ದಾರೆ. ಮಕ್ಕಳಿಗೆ ತಮ್ಮ ಮಕ್ಕಳಂತೆ ಕಾಣುತ್ತಾರೆ. ರಕ್ಷಣೆ ನೀಡುತ್ತಿದ್ದಾರೆ. ಇದೇ ಜನರ ನಿಜವಾದ ಪ್ರೀತಿ. ನಾನು ಜನರೊಂದಿಗೆ ನಡೆದ ರೀತಿ ಈಗ ನನಗೆ ಫಲ ನೀಡಲಿದೆ. ಎಲ್ಲೆಡೆ ಕಾಂಗ್ರೆಸ್ ಪರವಾಗಿ ವಾತಾವರಣ ಇದೆ. ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.