ಪ್ರಜ್ವಲ್ ರೇವಣ್ಣನನ್ನು ವಿಶ್ವಗುರು ಮೋದಿ ಕರೆತರಲಿ

Advertisement

ಹುಬ್ಬಳ್ಳಿ : ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣನನ್ನು ವಿಶ್ವಗುರು ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಕರೆತರಲಿ ಎಂದು ಅರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಮೊದಲೇ ಬಿಜೆಪಿ ರಾಜ್ಯ ನಾಯಕರು, ಕೇಂದ್ರ ನಾಯಕರಿಗೆ ತಿಳಿದಿತ್ತು. ಎಲ್ಲವೂ ಗೊತ್ತಿದ್ದೂ ಮೈತ್ರಿ ಮಾಡಿಕೊಂಡರು. ಪ್ರಜ್ವಲ್ ಗೆ ಟಿಕೇಟ್ ನೀಡಿದ್ದರು. ಈಗ ನಮಗೂ ಪ್ರಜ್ವಲ್ ಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಏನೇನು ಕ್ರಮ ಕೈಗೊಳ್ಳಬೇಕಿತ್ತೊ ಅದನ್ನು ಎರಡೇ ದಿನದಲ್ಲಿ ಕೈಗೊಂಡಿದೆ. ಎಸ್ಐಟಿ ರಚನೆ ಮಾಡಿ ತನಿಖೆ ಶುರುವಾಗಿದೆ. ಹೀಗಾಗಿ, ರಾಜ್ಯ ಸರ್ಕಾರ ಪ್ರಕರಣ ತನಿಖೆ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಕಾನೂನು ಪ್ರಕಾರ ಎಲ್ಲ ಕ್ರಮ ಜರುಗಿಸಿದೆ. ಈಗ ಜವಾಬ್ದಾರಿ ಇರುವುದು ಬಿಜೆಪಿಯವರದು. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಲು ಬಿಟ್ಟವರು ಬಿಜೆಪಿಯವರು. ಈಗ ಅವರೇ ಅಲ್ಲಿಂದ ಕರೆ ತರಬೇಕು. ವಿಶ್ವಗುರು ಎನಿಸಿಕೊಂಡವರು, ಬೇರೆ ದೇಶಗಳ ನಡುವಿನ ಯುದ್ಧ ನಿಲ್ಲಿಸುವವರು ಪ್ರಜ್ವಲ್ ರೇವಣ್ಣನನ್ನು ಕರೆತರಲಿ ಎಂದು ಒತ್ತಾಯ ಮಾಡಿದರು.