ಪ್ರವಾಸಕ್ಕೆ ಬಂದಿದ್ದ ಬಸ್ ಪಲ್ಟಿ: 18 ಮಂದಿಗೆ ಗಾಯ

Advertisement

ಕಾರವಾರ: ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ಬಸ್ ಪಲ್ಟಿಯಾಗಿ 18 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗಾಯಗೊಂಡಿರುವ ಘಟನೆ ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಶಹಾಪುರದ ಪ್ರಾರ್ಥನಾ ಪದವಿ & ಪದವಿ ಪೂರ್ವ ಕಾಲೇಜಿನ 50 ವಿಧ್ಯಾರ್ಥಿಗಳು, 8 ಉಪನ್ಯಾಸಕರು ಹಾಗೂ 2 ಆಡಳಿತ ಮಂಡಳಿಯ ಸದಸ್ಯರು ಸೇರಿ ಒಟ್ಟೂ 60 ಜನರು ಬಸ್ ನಲ್ಲಿ ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದರು. ಬುಧವಾರ ಜೋಗದಿಂದ ರಾತ್ರಿ ಮುರ್ಡೇಶ್ವರಕ್ಕೆ ಬರುವಾಗ ಸೂಳೆಮುರ್ಕಿ ಕ್ರಾಸ್ ಹತ್ತಿರ ರಸ್ತೆಯ ತಿರುವಿನಲ್ಲಿ ಬಸ್ ಚಾಲಕ ಅತಿವೇಗ ಅಜಾಗರೂಕತೆಯಿಂದ ಬಸ್ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಗ್ಗಿಗೆ ಬಿದ್ದಿದೆ.
ಅಪಘಾತದಲ್ಲಿ 5 ವಿಧ್ಯಾರ್ಥಿಗಳು, 11 ವಿಧ್ಯಾರ್ಥಿನಿಯರು, 2 ಜನ ಉಪನ್ಯಾಸಕರು ಸೇರಿ ಒಟ್ಟೂ 18 ಜನರು ಗಾಯಗೊಂಡಿದ್ದರು. ತಕ್ಷಣ ಗಾಯಾಳುಗಳನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.
ಅಪಘಾತಕ್ಕೀಡಾದ ಬಸ್ ನಲ್ಲಿದ್ದ ಇನ್ನುಳಿದ ವಿಧ್ಯಾರ್ಥಿಗಳು ಹಾಗೂ ಉಪನ್ಯಾಸಕರನ್ನು ಪ್ರತ್ಯೇಕ ವಾಹನದಲ್ಲಿ ಹೊ‌ನ್ನಾವರಕ್ಕೆ ಕರೆತಂದು ತಹಶೀಲ್ದಾರರ ಸಹಕಾರದೊಂದಿಗೆ ಬಿಸಿಎಮ್ ಹಾಸ್ಟೆಲ್ ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿರುತ್ತದೆ.
ವಿದ್ಯಾರ್ಥಿಗಳ ಪಾಲಕರು ಆತಂಕಕ್ಕೆ ಒಳಗಾಗದಂತೆ ಈಗಾಗಲೇ ಅಪಘಾತದ ಬಗ್ಗೆ ಕಾರವಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಹಾಪುರ ರವರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.