ಬಡ್ತಿ ಹೊಂದಿ ಅಧಿಕಾರ ಸ್ವೀಕರಿಸಿದ ತಾಸಿನಲ್ಲೇ ಸಾವು

Advertisement

ಧಾರವಾಡ: ಜಿಲ್ಲಾ ಖಜಾನೆ ಇಲಾಖೆ ಸಹಾಯಕ ನಿರ್ದೇಶಕರಾಗಿ ಬಡ್ತಿ ಹೊಂದಿ ಅಧಿಕಾರ ಸ್ವೀಕರಿಸಿದ ಅಧಿಕಾರಿಯೊಬ್ಬರು ಒಂದು ಗಂಟೆಯಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಸಂಭವಿಸಿದೆ.
ಜಯಪ್ರಕಾಶ ಚನಬಸಪ್ಪ ಕಲಕೋಟಿ(50) ಸಾವನ್ನಪ್ಪಿದ ಅಧಿಕಾರಿ. ಅವರಿಗೆ ತಾಯಿ, ಪತ್ನಿ, ಪುತ್ರ ಸೇರಿದಂತೆ ಅಪಾರ ಬಂಧು ಬಳಗವಿದೆ. ಜಯಪ್ರಕಾಶ ಅವರು ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕು ಖಜಾನೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ಧಾರವಾಡ ಜಿಲ್ಲಾ ಖಜಾನೆ ಇಲಾಖೆ ಸಹಾಯಕ ನಿರ್ದೇಶಕರಾಗಿ ಬಡ್ತಿ ಹೊಂದಿದ್ದರು.
ಸೋಮವಾರ ಮುಂಜಾನೆ ಕಚೇರಿಗೆ ಆಗಮಿಸಿದ ಅವರು ಸರಕಾರಿ ನಿಯಮದಂತೆ ಅಧಿಕಾರ ವಹಿಸಿಕೊಂಡ ಒಂದು ಗಂಟೆಯ ಬಳಿಕ ತೀವ್ರ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಜಯಪ್ರಕಾಶ ಅವರ ತಂದೆ ಚನಬಸಪ್ಪ ಅವರು ಈ ಹಿಂದೆ ಧಾರವಾಡದ ಉಪವಿಭಾಗಾಧಿಕಾರಿ ಆಗಿದ್ದ ಸಂದರ್ಭದಲ್ಲಿಯೇ ಅಕಾಲಿಕವಾಗಿ ನಿಧನರಾಗಿದ್ದರು.