ಬಯ್ಯಾಪುರಗೆ ಟಿಕೆಟ್ ನೀಡಲು ಮನವಿ

Advertisement

ಕುಷ್ಟಗಿ: ಕಾಂಗ್ರೆಸ್ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಸಾರಿಗೆ ಸಚಿವ ರಾಮುಲಿಂಗರೆಡ್ಡಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕರ್ತರು ರಾಮಲಿಂಗ ರೆಡ್ಡಿ ಅವರನ್ನು ಮಾತನಾಡಿಸಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ೮ ಸಾವಿರ ಅಧಿಕ ಮತಗಳಿಂದ ಸೋತಿದ್ದಾರೆ. ಹೀಗಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಿದ್ದೇ ಆದರೆ ಬಹುಮತದಿಂದ ಬಯ್ಯಾಪುರ ಗೆಲುವು ಸಾಧಿಸುತ್ತಾರೆ ಎಂದರು.
ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ೨೦ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಮಾಜಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರಿಗೆ ಟಿಕೆಟ್ ನೀಡುವಂತೆ ನೀವು ಬೇಡಿಕೆ ಇಟ್ಟಿದ್ದೀರಿ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮುಖಂಡರಿಗೆ ತಿಳಿಸುತ್ತೇನೆ ಎಂದು ತಿಳಿಸಿದರು.
ಸೋಮಶೇಖರ ವೈಜಾಪುರ, ವಕೀಲರಾದ ಅಮರೇಗೌಡ ಪಾಟೀಲ, ಮಾಲತಿ ನಾಯಕ, ಶಂಕರಗೌಡ, ಪ್ರಕಾಶ ರಾಥೋಡ, ಉಮೇಶ ಮಂಗಳೂರು, ಮಂಜುನಾಥ ಕಟ್ಟಿಮನಿ, ದೊಡ್ಡಬಸನಗೌಡ ಪಾಟೀಲ ಬಯ್ಯಾಪುರ ಸೇರಿದಂತೆ ಕಾರ್ಯಕರ್ತರು ಇದ್ದರು.