ಬಳ್ಳಾರಿ ಉತ್ಸವ: ಬೀದಿಗಳಲ್ಲಿ ರಂಗೋಲಿ ಚಿತ್ತಾರ

Advertisement

ಬಳ್ಳಾರಿ: ಚೊಚ್ಚಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ಜನರಲ್ಲಿ ದಿನದಿಂದ ದಿನಕ್ಕೆ ಉತ್ಸುಕತೆ ಹೆಚ್ಚಾಗುತ್ತಿದೆ. ಹೀಗೆ ಕಂಡುಬಂದಿದ್ದು, ನಗರದ ಮುಖ್ಯ ರಸ್ತೆಗಳಲ್ಲಿ ಹಾಗೂ ಮುಖ್ಯ ವೃತ್ತಗಳಲ್ಲಿ ಹಾಕಲಾಗಿದ್ದ ರಂಗೋಲಿ ಚಿತ್ತಾರಗಳು. ಹೌದು ಬೆಳಗಿನ ಜಾವದಿಂದಲೇ ಯುವತಿಯರು ಮತ್ತು ಹೆಂಗಳೆಯರು ಕೈಯಲ್ಲಿ ರಂಗೋಲಿ ಹಿಡಿದು ಮುಖ್ಯ ವೃತ್ತಗಳಲ್ಲಿ ಹಾಗೂ ನಗರದ ಮುಖ್ಯ ರಸ್ತೆಗಳಲ್ಲಿ ರಂಗೋಲಿ ಬಿಟ್ಟಿದ್ದು, ವಿಶೇಷವಾಗಿತ್ತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ವತಿಯಿಂದ ಬಳ್ಳಾರಿ ಉತ್ಸವದ ಅಂಗವಾಗಿ ಜನವರಿ 20ರಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಮೊದಲ ಸುತ್ತಿನ ರಂಗೋಲಿ ಸ್ಪರ್ಧೆಗೆ ಮಹಾನಗರ ಪಾಲಿಕೆಯ ಮಹಾಪೌರರಾದ ಎಂ.ರಾಜೇಶ್ವರಿ ಅವರು ರಂಗೋಲಿ ಹಾಕುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆ ವಿಭಜನೆಯಾದ ನಂತರ ಮೊದಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದ ಬಗ್ಗೆ ಎಲ್ಲರಲ್ಲೂ ಉತ್ಸಾಹ ಹೆಚ್ಚಾಗಿದೆ. ಅದರಲ್ಲೂ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿರುವ ರಂಗೋಲಿ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಯ ಮತ್ತು ನಗರವಾಸಿಗಳು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಮಹಿಳೆಯರಲ್ಲಿ ಇನ್ನಷ್ಟು ಆಸಕ್ತಿಯನ್ನು ಹೆಚ್ಚಿಸಿದೆ ಎಂದು ಹೇಳಿ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಮತ್ತು ಯುವತಿಯರಿಗೆ ಶುಭ ಹಾರೈಸಿದರು.
ಮೊದಲ ಸುತ್ತಿನಲ್ಲಿ ಒಟ್ಟು 160 ಮಹಿಳೆಯರು ಹಾಗೂ ಯುವತಿಯರು ಭಾಗವಹಿಸಿದ್ದಾರೆ. 50ರಿಂದ 60 ಜನರ ಸುಂದರವಾಗಿ ಮೂಡಿಬಂದ ರಂಗೋಲಿಯನ್ನು ನಾಳೆ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುವುದು.