ಬಿಜೆಪಿ ಜಯ ನಿಶ್ಚಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Advertisement

ಬೆಂಗಳೂರು: ಈ ಬಾರಿ ಜನತೆ ಸತ್ಯ, ನ್ಯಾಯ ಮತ್ತು ಸಮಾನತೆಗೆ ಆಶೀರ್ವಾದ ಮಾಡುತ್ತಾರೆ. ಅದೇ ಪಥದಲ್ಲಿ ಬಿಜೆಪಿ ನಡೆಯುತ್ತಿದ್ದು, ಬಿಜೆಪಿ ಜಯ ನಿಶ್ಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬಸವ ಜಯಂತಿಯ ಅಂಗವಾಗಿ ಚಾಲುಕ್ಯ ವೃತ್ತದ ಬಳಿಯಿರುವ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ನವ ಕರ್ನಾಟಕ ನಿರ್ಮಾಣ ಮಾಡುವ ಸಂಕಲ್ಪವಿದ್ದು, ಈ ಸಂದರ್ಭದಲ್ಲಿ ಕುಲ ಕುಲವೆಂದು ಬಡಿದಾಡದಿರಿ ಎಂಬ ಕನಕದಾಸರ ಹಾಡಿನ ಸಾಲನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು ಕುಲಕುಲಗಳಲ್ಲಿ ವ್ಯತ್ಯಾಸವನ್ನು ಹಾಗೂ ಬಡಿದಾಟವನ್ನು ಉಂಟು ಮಾಡುವ ಶಕ್ತಿಗಳಿಗೆ ದೇವರು ಸದ್ಭುದ್ದಿ ಕೊಡಲಿ ಎಂದರು. ಚುನಾವಣೆಯಲ್ಲಿ ಜನರು ತೀರ್ಪು ನೀಡುತ್ತಾರೆ. ಅದನ್ನು ಎಲ್ಲರೂ ಒಪ್ಪಬೇಕು. ನಮ್ಮ ಧ್ಯೇಯ ಧೋರಣೆಗಳನ್ನು ಮುಂದಿಟ್ಟುಕೊಂಡು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ ಎಂದರು.


ಸಮಾನತೆಯ ಹರಿಕಾರ ಬಸವಣ್ಣ
ಸಮಾನತೆಯ ಹರಿಕಾರ ಬಸವಣ್ಣ ಸರ್ವರಿಗೂ ಆದರ್ಶ ಸಮಾನಯೆಯ ವಿಚಾರವನ್ನು ಕಾರ್ಯರೂಪಕ್ಕೆ ತಂದಿರುವ ಕ್ರಾಂತಿಕಾರಿ ವ್ಯಕ್ತಿ ಎಂದರು.
ಬಸವ ಪಥದಲ್ಲಿ ಆಡಳಿತ
ಬಸವ ಚಿಂತನೆ, ತತ್ವ ಆದರ್ಶಗಳ ಮೇಲೆ, ಬಸವ ಪಥದಲ್ಲಿ ಆಡಳಿತ ಮಾಡಿದ್ದು ಮುಂದೆಯೂ ಬಸವ ಪಥ ದಲ್ಲಿ ಕರ್ನಾಟಕದ ತುಳಿತಕ್ಕೊಳಪಟ್ಟ ಸಮುದಾಯಗಳಿಂದ ಹಿಡಿದು ಎಲ್ಲಾ ದುಡಿಯುವ ಸಮುದಾಯಗಳಿಗೆ ಗೌರವ, ಮಾನ, ಸನ್ಮಾನ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಯ ಧ್ಯೇಯವಿಟ್ಟುಕೊಂಡು ಚುನಾವಣಾ ಪ್ರಚಾರ ಮಾಡುತ್ತಿದ್ದು, ಕರ್ನಾಟಕದ ಮಹಾಜನತೆ ನಮಗೆ ಸಂಪೂರ್ಣ ಬೆಂಬಲ ನೀಡುವ ವಿಶ್ವಾಸವಿದೆ ಎಂದರು.