ಬಿಜೆಪಿ ಸಭೆಯಲ್ಲಿಯೇ ಮುಖಂಡನಿಗೆ ಹೃದಯಾಘಾತ: ಸಾವು

Advertisement

ಚಿತ್ರದುರ್ಗ: ಭಾರತೀಯ ಜನತಾ ಪಾರ್ಟಿಯ ಬಳ್ಳಾರಿ ವಿಭಾಗದ ಪ್ರಭಾರಿಗಳಾದ ಸಿದ್ಧೇಶ್ ಯಾದವ್(49) ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.
ಇಂದು ಮಧ್ಯಾಹ್ನ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಪಕ್ಷದ ಸಭೆಯಲ್ಲಿರುವಾಗಲೇ ಹೃದಯಾಘಾತವಾದಾಗ ಅವರನ್ನು ಹತ್ತಿರದ ಕೆಸಿ ಜನರಲ್ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಇಲ್ಲವಾಗಿದ್ದಾರೆ. ಇವರು ಎಬಿವಿಪಿಯಲ್ಲಿ ೧೯೮೮ರಿಂದ ಕಾರ್ಯ ನಿರ್ವಹಿಸಿದ್ದು, ನಗರ ಕಾರ್ಯದರ್ಶಿ ರಾಜ್ಯ ಕಾರ್ಯಕಾರಿಣಿ ಸದಸ್ಯರು, ಜಿಲ್ಲಾ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದು, ನಂತರ ಬಿಜೆಪಿಯನ್ನು ಸೇರಿದ ಅವರು ಇದರಲ್ಲಿ ಎನ್.ಜಿ.ಓ. ರಾಜ್ಯ ಸಹ ಸಂಚಾಲಕರಾಗಿ, ಚಿತ್ರದುರ್ಗ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ, ೨೦೦೮ ರಿಂದ ೨೦೧೧ರವರೆಗೆ ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ, ೨೦೧೩ರಲ್ಲಿ ಬಿಜೆಪಿಯಿಂದ ಹಿರಿಯೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ, ರಾಜ್ಯ ಓಬಿಸಿ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷರಾಗಿ ಈಗ ಹಾಲಿ ಬಳ್ಳಾರಿ ವಿಭಾಗದ ಪ್ರಭಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗ ಇದ್ದಾರೆ.