ಬೆಂಗಳೂರಿಗೆ ಆರೋಗ್ಯಕ್ಕಾಗಿ ವಿಶೇಷ ವ್ಯವಸ್ಥೆ ರೂಪಿಸಲಾಗುತ್ತಿದೆ: ಬಸವರಾಜ ಬೊಮ್ಮಾಯಿ

Advertisement

ಬೆಂಗಳೂರು: ಬೆಂಗಳೂರಿನ ನಾಗರಿಕರ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಅತಿ ಹೆಚ್ಚಿನ ಗಮನವನ್ನು ನೀಡಲಾಗಿದ್ದು, ಬೆಂಗಳೂರಿಗೆ ಆರೋಗ್ಯಕ್ಕಾಗಿ ವಿಶೇಷ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ ವತಿಯಿಂದ ಜಯನಗರದಲ್ಲಿ ಆಯೋಜಿಸಿದ್ದ ಜನೌಷಧಿ ದಿವಸ್ ಆಚರಣೆ-2023 ಮತ್ತು 100 ನೇ ಜನೌಷಧಿ ಕೇಂದ್ರವನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿನ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು ಪ್ರತಿ ವಾರ್ಡಿಗೆ ನಮ್ಮ ಕ್ಲಿನಿಕ್ ಪ್ರಾರಂಭ ಮಾಡಲಾಗಿದೆ. ಈಗಾಗಲೇ 100 ಪ್ರಾರಂಭ ಮಾಡಲಾಗಿದ್ದು, ಇನ್ನೂ ನೂರು ಇದೇ ವಾರದಲ್ಲಿ ಪ್ರಾರಂಭಿಸಲಾಗುತ್ತಿದೆ. 240 ವಾರ್ಡುಗಳಲ್ಲಿ ನಮ್ಮ ಕ್ಲಿನಿಕ್ ಪ್ರಾರಂಭವಾಗುತ್ತಿದೆ. ಸುಮಾರು 19 ಪಿ.ಹೆಚ್.ಸಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. 4 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಎಲ್ಲೆಡೆ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಇಂದು ಸಂಚಾರಿ ಆಸ್ಪತ್ರೆಯನ್ನೂ ಹಾಗೂ ಡಯಾಲಿಸಿಸ್ ಕೇಂದ್ರವನ್ನೂ ಉದ್ಘಾಟಿಸಲಾಗಿದ್ದು, ರೋಗಿಗಳ ಮುಖದಲ್ಲಿ ಮಂದಹಾಸ ನೋಡಿದಾಗ ಸಾರ್ಥಕ ಭಾವ ಮೂಡುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.


ಆಡಳಿತಗಾರರಿಗೆ ಕಳಕಳಿ ಇರಬೇಕು
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿ ಮತ್ತು ಬಡವರ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ. ಅವರು ಪ್ರಧಾನಿಯಾಗುವ ಮುನ್ನ ಅತ್ಯಂತ ಕಡಿಮೆ ದರದಲ್ಲಿ ಔಷಧಗಳನ್ನು ನೀಡುವ ಕಾರ್ಯಕ್ರಮ ಇರಲಿಲ್ಲ. ಆಡಳಿತಗಾರರಿಗೆ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳ ಬಗ್ಗೆ ಕಳಕಳಿ ಇರಬೇಕು. ಬಡತನವನ್ನು ಅನುಭವಿಸಿದಾಗ, ಹತ್ತಿರದಿಂದ ನೋಡಿ ಬಡವರ ಸಂಕಷ್ಟವನ್ನು ತಿಳಿದುಕೊಂಡಾಗ ಮಾತ್ರ ಬರುತ್ತದೆ. ನರೇಂದ್ರ ಮೋದಿಯವರಿಗೆ ಬಡತನ ಎಂದರೇನು ಎಂದು ತಿಳಿದಿದೆ. ನೂರು ರೂ.ಗಳೂ ಸಹ ಇಲ್ಲದ ಸ್ಥಿತಿಯಲ್ಲಿರುತ್ತಾರೆ, ಒಔಷಧಿ ಕಂಪನಿಗಳ ದರ ದಕ್ಕೆ ಹತ್ತುಪಟ್ಟು ಮಾಡಿರುತ್ತಾರೆ. ಬಡವರ ಕ್ಷಟವನ್ನು ಅರ್ಥಮಾಡಿಕೊಂಡಿರುವ ಪ್ರಧಾನಿಗಳು ಬಡವರಿಗಾಗಿ ಸುಲಭ ಮತ್ತು ಕಡಿಮೆ ದರದಲ್ಲಿ ದೊರೆಯಬೇಕೆಂದು. ಗುಣಮುಖರಾಗಿ ಆರೋಗ್ಯವಂತರಾಗಬೇಕು. ಭಾರತ ಸಶಕ್ತವಾಗಬೇಕಾದರೆ , ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ತಲುಪಬೇಕೆಂದು ಇಂಥ ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.


ಬದ್ಧತೆಯ ನಾಯಕತ್ವ
ಆರೋಗ್ಯಕ್ಕೆ ಮೊದಲು ಅಗತ್ಯವಿರುವುದು ಶುದ್ಧವಾದ ನೀರು, ದೇಶದ ಗ್ರಾಮಗಳಲ್ಲಿರುವ ಎಲ್ಲರ ಮನೆಗೆ ಮುಂದಿನ 5 ವರ್ಷಗಳಲ್ಲಿ ನೀರು ಕೊಡುವುದಾಗಿ ಘೋಷಿಸಿದ್ದ ಪ್ರಧಾನಿಗಳು, ನಾಯಕನಿಗೆ ಬದ್ಧತೆ, ಛಲ,ಬುದ್ಧಿವಂತಿಕೆ ಹಾಗೂ ಬುದ್ದಿವಂತಿಕೆಗೆ ಹಣ ಕೊಡುವ ಹೃದಯ ವೈಶಾಲ್ಯವಿದ್ದರೆ ಅದು ಸಾಧ್ಯವಿದೆ. ಜಲ್ ಜೀವನ್ ಮಿಷನ್ ಅಡಿಯಲ್ಲಿ ಅಸಾಧ್ಯವಾದುದನ್ನು ಸಾಧ್ಯ ಮಾಡಲಾಗುತ್ತಿದೆ. ಅಸಾಧ್ಯವಾದುದನ್ನು ಸಾಧ್ಯ ಮಾಡುವುದೇ ನಿಜವಾದ ನಾಯಕತ್ವ. 10 ಕೋಟಿಗಳಿಂತ ಹೆಚ್ಚು ಮನೆಗಳಿಗೆ ಮೋದಿಯವರು ಶುದ್ಧವಾದ ಕುಡಿಯುವ ನೀರನ್ನು ಕೊಡುತ್ತಿದ್ದಾರೆ. ಕರ್ನಾಟಕ ಒಂದರಲ್ಲಿಯೇ 72 ವರ್ಷ ಕೇವಲ 25 ಲಕ್ಷ ಮನೆಗಳಿಗೆ ನೀರು ಕೊಡಲಾಗಿತ್ತು. ಕಳೆದ ಮೂರು ವರ್ಷಗಳಲ್ಲಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸಲಾಗಿದೆ. ಇದು ಬದ್ಧತೆಯ ನಾಯಕತ್ವ, ಹಾಗೂ ಬದ್ಧತೆ.
ಕ್ರಿಯಾಶೀಲ ಕೇಂದ್ರ ಸಚಿವರು
ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರು ಕೂಡ ಕ್ರಿಯಾಶೀಲ ಸಚಿವರು. ರಾಜ್ಯಕ್ಕೆ ಹೆಚ್ಚುವರಿ ಲಸಿಕೆಯನ್ನು ಒದಗಿಸಿದ್ದಲ್ಲದೇ ಯೂರಿಯಾ ಕೊರತೆಯಾದಾಗಲೂ ಆದೇಶ ಮಾಡಿ ಕೊರತೆ ನೀಗಿಸಿದ್ದರು ಎಂದು ಸ್ಮರಿಸಿದರು.
ದಾಖಲೆ
ಸಂಸದ ತೇಜಸ್ವಿ ಸೂರ್ಯ ಅವರ ಕ್ಷೇತ್ರದಲ್ಲಿ ನೂರನೇ ಜನೌಷಧಿ ಕೇಂದ್ರ ಉದ್ಘಾಟನೆಗೊಂಡಿದ್ದು, ಇಡೀ ದೇಶದಲ್ಲಿ ಸಂಸದರೊಬ್ಬರ ಕ್ಷೇತ್ರದಲ್ಲಿ ಇರುವುದು ಒಂದು ದಾಖಲೆ. ಇದು ಜನಪರ ಕಾಳಜಿಯನ್ನು ತೋರಿಸುತ್ತದೆ ಎಂದರು. ವಾಸವಿ ಚಾರಿಟಬಲ್ ಆಸ್ಪತ್ರೆಗೆ ಅಭಿನಂದನೆಗಳನ್ನು ಸಲ್ಲಿಸಿದ ಅವರು ಕೆ.ಎಸ್.ಆರ್.ಟಿ.ಸಿ ಯಲ್ಲಿ ಆಸ್ಪತ್ರೆಯಾಗಿ ಪರಿವರ್ತನೆ ಮಾಡಿರುವುದನ್ನು ದತ್ತು ಪಡೆದು ಡಯಾಲಿಸ್ ಕೇಂದ್ರ ತೆರೆದು ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.