ಕಾಂಗ್ರೆಸ್ನವರು ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಇದಕ್ಕೆ ನಾವು ಏನು ಮಾಡಲು ಸಾಧ್ಯ, ಅವರನ್ನು ಭ್ರಮೆಯಲ್ಲಿರಲು ಬಿಟ್ಟುಬಿಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಯ ಮತ್ತು ಭ್ರಮೆಯಲ್ಲಿ ಕಾಂಗ್ರೆಸ್ನವರು ಬದುಕುತ್ತಿದ್ದಾರೆ. ಯಾರು ತಪ್ಪು ಮಾಡಿರುತ್ತಾರೆಯೋ ಅವರಿಗೆ ಭಯ ಇರುತ್ತದೆ. ಇಷ್ಟು ದಿನ ಜನರನ್ನು ಭ್ರಮೆಯಲ್ಲಿಟ್ಟಿದ್ದರು. ಕಾಂಗ್ರೆಸ್ ಏನು ಮಾಡುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಮುಂದಿನ ಚುನಾವಣೆಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ಅವರು ಎಂದಿಗೂ ದೇಶಕ್ಕಾಗಿ ವಿಚಾರ ಮಾಡಿಲ್ಲ. ನಕಲಿ ಗಾಂಧಿ ಕುಟುಂಬದವರ ಬಗ್ಗೆಯಷ್ಟೆ ಯೋಚಿಸುತ್ತಾರೆ. ಇನ್ನು ಕಾಂಗ್ರೆಸ್ನವರದ್ದು ಭಾರತ್ ಜೋಡೊ ಯಾತ್ರೆ ಅಲ್ಲ; ಭಾರತ್ ತೋಡೊ ಕಾರ್ಯಕ್ರಮ ಎಂದು ಅವರು ಟೀಕಿಸಿದರು.