ಭಾರತದ ಮಾನ ಕಳೆಯುತ್ತಿರುವ ರಾಗಾಗೆ ಚುನಾವಣೆಯಲ್ಲಿ ತಕ್ಕ ಉತ್ತರ ಸಿಗಲಿದೆ: ಅರುಣ್ ಸಿಂಗ್

arunsingh
Advertisement

ದಾವಣಗೆರೆ: ಭಾರತ್ ಜೋಡೋ ಯಾತ್ರೆ ಮಾಡಿದ ರಾಹುಲ್ ಗಾಂಧಿ, ಅಮೇರಿಕಾ, ಯೂರೋಪ್ ದೇಶಗಳಿಗೆ ಹೋಗಿ ಭಾರತದ ಪ್ರಜಾಪ್ರಭುತ್ವ ಉಳಿಸುವಂತೆ ಕೇಳುವ ಮೂಲಕ ಭಾರತದ ಮಾನ ಕಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹರಿಹಾಯ್ದರು.
ನಗರದ ಜಿಎಂಐಟಿ ಕಾಲೇಜು ಪಕ್ಕದ ಮೈದಾನದಲ್ಲಿ ಶನಿವಾರ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ಸಮಾವೇಶದ ಸಿದ್ಧತೆ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶ ಹಾಗೂ ಸಂವಿಧಾನ ಎರಡೂ ಬಿಜೆಪಿ ಅಧಿಕಾರಕ್ಕೆ ಬಂದ ತರುವಾಯ ಸುರಕ್ಷಿತವಾಗಿವೆ. ಆದರೆ, ದೇಶದ ಮಾನವನ್ನು ವಿದೇಶಗಳಿಗೆ ಹೋಗಿ ಕಳೆಯುತ್ತಿರುವ ರಾಹುಲ್ ಗಾಂಧಿಗೆ ದೇಶದ ಜನತೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕಿಡಿಕಾರಿದರು.
ರಾಹುಲ್ ಗಾಂಧಿ ಅಮೇರಿಕಾ, ಯುರೋಪ್ ದೇಶಗಳಲ್ಲಿ ಭಾರತದ ಬಗ್ಗೆ ಆಡುತ್ತಿರುವ ಮಾತುಗಳನ್ನು ಜನತೆ ಗಮನಿಸುತ್ತಿದ್ದಾರೆ. ದೇಶಕ್ಕೆ ಅಪಮಾನ ಮಾಡುವ ರಾಹುಲ್‌ರನ್ನು ಜನತೆ ಎಂದಿಗೂ ಸಹಿಸುವುದಿಲ್ಲ. ಇಂತಹ ಕೆಲಸಗಳಿಂದಲೇ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಕುಸಿಯುತ್ತಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ಸನ್ನು ಜನತೆ ತಿರಸ್ಕರಿಸಲಿದ್ದಾರೆ ಎಂದರು.
ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಪಕ್ಷದ ಸಂಸದೀಯ ಮಂಡಳಿ ನಿರ್ಧಾರ ಮಾಡಲಿದೆ. ಎಲ್ಲೆಡೆ ಬಿಜೆಪಿಪರ ಅಲೆ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿಗೆ ಜನ ಆಶೀರ್ವದಿಸಲಿದ್ದಾರೆ. ಡಬಲ್ ಇಂಜಿನ್ ಬಿಜೆಪಿ ಸರ್ಕಾರದ ಜನಪರ ಕಾಳಜಿ, ಅಭಿವೃದ್ಧಿ ಮಂತ್ರ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದು ಅವರು ತಿಳಿಸಿದರು.