ಭಾರತ ಹಿಂದುರಾಷ್ಟ್ರವಾದರೆ ದೊಡ್ಡ ಅಪಾಯ

Advertisement

ದಾವಣಗೆರೆ: ಭಾರತ ಹಿಂದುರಾಷ್ಟ್ರ ಆಗಬಾರದು, ಹಿಂದು ರಾಷ್ಟ್ರವಾದರೆ ಅದಕ್ಕಿಂತಲೂ ದೊಡ್ಡ ಅಪಾಯ ಮತ್ತೊಂದಿಲ್ಲ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತಾಲೂಕಿನ ರುದ್ರನಕಟ್ಟೆ ಗ್ರಾಮದಲ್ಲಿ ಬುಧವಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತವೇನಾದರೂ ಹಿಂದು ರಾಷ್ಟ್ರವಾದರೆ ಪಾಕಿಸ್ಥಾನ, ಅಪಘಾನಿಸ್ಥಾನದಂತೆಯೇ ಆಗುತ್ತದೆ ಎಂದರು.
ನಮ್ಮ ದೇಶ ಹಿಂದು ರಾಷ್ಟ್ರವಾಗಬಾರದು. ಹಿಂದು ರಾಷ್ಟ್ರವಾದರೆ ಅದಕ್ಕಿಂತಲೂ ದೊಡ್ಡ ಅಪಾಯ ಮತ್ತೊಂದಿಲ್ಲವೆಂಬುದಾಗಿ ಅಂಬೇಡ್ಕರ್‌ರವರೇ ಹೇಳಿದ್ದಾರೆ. ನಮ್ಮ ದೇಶ ಹಿಂದು ರಾಷ್ಟ್ರವಾದರೆ ದೇಶಕ್ಕೆ ತೊಂದರೆಯಾಗುತ್ತದೆ ಎಂದು ಅವರು ಹೇಳಿದರು.
ಧರ್ಮದ ಹೆಸರಿನಲ್ಲಿ ಸರ್ವಾಧಿಕಾರ ಮಾಡಿದಂತಹ ಪಾಕಿಸ್ಥಾನ, ಅಪಘಾನಿಸ್ಥಾನಗಳು ದಿವಾಳಿಯಾಗಿವೆ. ದೇಶವು ಜಾತ್ಯತೀತ ತತ್ವವನ್ನು ಬಿಟ್ಟು, ಧರ್ಮದ ಹಿಂದೆ ಹೋದರೆ ಅಭಿವೃದ್ಧಿ ಕಾಣುವುದಿಲ್ಲ. ಇಂದು ದೇಶದಲ್ಲಿ ಜಾತ್ಯತೀತ ತತ್ವಕ್ಕೆ ಅಪಾಯ ಬಂದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆ ಆರ್‌ಎಸ್ಎಸ್‌ನಿಂದಾಗಿ ದೇಶದ ಜಾತ್ಯತೀತ ತತ್ವಕ್ಕೆ ಸಂಕಷ್ಟ ಬಂದಿದ್ದು, ದೇಶದಲ್ಲಿ ಅಪಾಯ ಶುರುವಾಗಿದೆ. ಬಿಜೆಪಿಯ ಅಂಗ ಸಂಘಟನೆಗಳು ಈಗ ಭಾರತವನ್ನು ಹಿಂದು ದೇಶವನ್ನು ಮಾಡಲು ಹೊರಟಿವೆ. ಇದಕ್ಕೆ ಅವಕಾಶ ಮಾಡಿಕೊಟ್ಟರೆ, ನಮ್ಮ ದೇಶವೂ ಪಾಕಿಸ್ಥಾನ, ಅಪಘಾನಿಸ್ಥಾನದಂತೆಯೇ ಆಗುತ್ತದೆ ಎಂದು ಅವರು ಹೇಳಿದರು.
ಧರ್ಮದ ಮೇಲೆ ರಾಜಕೀಯ ಮಾಡುವ ಪಕ್ಷಗಳ ಬಗ್ಗೆ ನಾವು ಸದಾ ಹುಷಾರಾಗಿರಬೇಕು. ಧರ್ಮದಿಂದ ಹಿಂದುಳಿದವರನ್ನು ಮೇಲೆತ್ತಲು ಸಾಧ್ಯವಾಗುತ್ತಿಲ್ಲ. ಇತಿಹಾಸವನ್ನು ನೋಡಿ, ನಾವು ಪಾಠ ಕಲಿಯಬೇಕು. ಇತಿಹಾಸವನ್ನು ನೋಡಿ, ನಾವು ದೇಶವನ್ನು ಕಟ್ಟಬೇಕು. ದೇಶಕ್ಕೆ ಉಜ್ವಲ ಭವಿಷ್ಯವಿದೆ ಎಂದು ಅವರು ತಿಳಿಸಿದರು.
ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಯಾರು ಹಿಂದುಳಿದವರು, ಅಲ್ಪಸಂಖ್ಯಾತ ನ್ಯಾಯಾಧೀಶರಿದ್ದಾರೆ? ಎಷ್ಟು ಜನರಿದ್ದಾರೆ? ಮೇಲ್ವರ್ಗದವರೇ ಸಮಾಜವನ್ನು ನಿಯಂತ್ರಣ ಮಾಡುತ್ತಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ನಮಗೂ ಸಮಾಜದಲ್ಲಿ ಉನ್ನತ ಸ್ಥಾನಗಳು ಸಿಗಬೇಕು. ಧರ್ಮಕ್ಕಾಗಿ ಮತ್ತೊಬ್ಬರ ಜೊತೆ ಹೋರಾಟ ಮಾಡಲು ಹೋದರೆ ನಮ್ಮ ಹಕ್ಕನ್ನೇ ಕಳೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ನಾವು ಬದಲಾಗಬೇಕು ಎಂದು ಅವರು ಕರೆ ನೀಡಿದರು.