ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರು ಸಾವು

Advertisement

ಬಸವಕಲ್ಯಾಣ: ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಅಪ್ಪೇ ಆಟೋಗೆ ಲಾರಿ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ರಾಜ್ಯದ ಗಡಿಯಲ್ಲಿರುವ ತಾಲೂಕಿನ ಮನ್ನಳ್ಳಿ ಕ್ರಾಸ್ ಬಳಿ ಸೋಮವಾರ ಜರುಗಿದೆ.
ಮಹಾರಾಷ್ಟ್ರದ ಉಮ್ಮರ್ಗಾ ತಾಲೂಕಿನ ಸುಂದರವಾಡಿ ಗ್ರಾಮದ ನಿವಾಸಿ ಪ್ರಮೀಳಾ ಸುನೀಲ್ ಜಗದಾಳೆ(32), ಇವಳ ಪತಿ ಆಟೋ ಚಾಲಕ ಸುನೀಲ ಜಗದಾಳೆ(35), ಈತನ ತಾಯಿ ಅನುಷಾಬಾಯಿ ಮಹಾದೇವ ಜಗದಾಳೆ(65) ಹಾಗೂ ತುಳಜಾಪೂರ ತಾಲೂಕಿನ ಶಾಪೂರ ಗ್ರಾಮದ ನಿವಾಸಿ ಪೂಜಾ ಜಾಧವ ಮೃತ ದುರ್ದೈವಿಗಳಾಗಿದ್ದಾರೆ. ಗೀತಾ ಶಿವರಾಮ ಜಗದಾಳೆ ಎನ್ನುವ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಲಾತೂರ ಆಸ್ಪತ್ರೆ ಸಾಗಿಸಲಾಗಿದೆ.
ಪವಿತ್ರ ಶ್ರಾವಣ ಮಾಸದ ನಿಮಿತ್ತ ಬಸವಕಲ್ಯಾಣ ತಾಲೂಕಿನ ಚಂಡಕಾಪೂರ ಬಳಿಯ ಐತಿಹಾಸಿಕ ಕ್ಷೇತ್ರ ಅಮೃತಕುಂಡದ ಶ್ರೀ ರಾಮಲಿಂಗೇಶ್ವರ ದರ್ಶನಕ್ಕೆಂದು ಬಂದಿದ್ದರು. ದರ್ಶನ ಮುಗಿಸಿಕೊಂಡು ಮರಳಿ ಗ್ರಾಮಕ್ಕೆ ತೆರಳುವಾಗ ಮಾರ್ಗಮಧ್ಯೆ ಮನ್ನಳ್ಳಿ ಬಳಿ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿಯಾಗಿ ಘಟನೆ ಸಂಭವಿಸಿದ್ದು, ದೇವರ ದರ್ಶನಕ್ಕಾಗಿ ಬಂದವರು ಶಾಶ್ವತವಾಗಿ ದೇವರ ಪಾದ ಸೇರಿದ್ದಾರೆ.
ಆಟೋದಲ್ಲಿ ಒಟ್ಟು 8 ಜನ ಪ್ರಯಾಣಿಸುತ್ತಿದ್ದು, ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ ಮೂವರು ಮಹಾರಾಷ್ಟ್ರದ ಉಮ್ಮರ್ಗಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿದ ಸಿಪಿಐ ಅಲಿಸಾಬ್, ಸಂಚಾರಿ ಠಾಣೆ ಪಿಎಸ್ಐ ಸುವರ್ಣ ಮಲಶಟ್ಟಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ವೇಳೆ ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಸ್ಥಳೀಯ ಶಾಸಕ ಶರಣು ಸಲಗರ್, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವು ಕಲ್ಪಿಸಿದ್ದಾರೆ.